ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ನಾಟಕ ರಚನಾ ಸ್ಪರ್ಧೆ ಸಾಮಾನ್ಯ ವಿಭಾಗದಲ್ಲಿ ಹುಬ್ಬಳ್ಳಿಯ ಕಾವ್ಯಾ ಕಡಮೆ ನಾಗರಕಟ್ಟೆ ಅವರ ‘ಆಟದೊಳಗಾಟ’ ಹಾಗೂ ಬೆಂಗಳೂರಿನ ಬಿ.ಎಂ. ಗಿರಿರಾಜ್ ಅವರ ‘ಸುಗಂಧದ ಸೀಮೆಯಾಚೆ’ ನಾಟಕಗಳು ಆಯ್ಕೆಯಾಗಿವೆ.
ಈ ನಾಟಕಗಳಿಗೆ ತಲಾ ₹ 40 ಸಾವಿರ ನಗದು ಬಹುಮಾನ ದೊರೆಯಲಿದೆ.
ಉಡುಪಿ ಜಿಲ್ಲೆಯ ಕುಂಜಿಬೆಟ್ಟು ನಿವಾಸಿ ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನನ್ನ ಪಗಡೆ ಹಾಸು’ ನಾಟಕ ಸಮಾಧಾನಕರ ಬಹುಮಾನಕ್ಕೆ ಆಯ್ಕೆಗೊಂಡಿದ್ದು, ₹ 20 ಸಾವಿರ ನಗದು ಬಹುಮಾನ ಪಡೆಯಲಿದೆ.
ವಿದ್ಯಾರ್ಥಿ ವಿಭಾಗದಲ್ಲಿ ದಾವಣಗೆರೆಯ ಕೆ.ಎ. ಓಬಳಪ್ಪ ಅವರ ‘ವಿವೇಕಯಾನ’ ಹಾಗೂ ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂ ವಿದ್ಯಾರ್ಥಿನಿ ಎಚ್.ವಿ. ಪ್ರಮೀಳಾಅವರ ‘ಮನ್ನಾ’ ಆಯ್ಕೆಯಾಗಿದ್ದು, ತಲಾ ₹ 40 ಸಾವಿರ ಬಹುಮಾನ ದೊರೆಯಲಿದೆ.
ರಂಗಕರ್ಮಿಗಳಾದ ಎಚ್.ಎಸ್. ಉಮೇಶ್, ಶಿರಸಿಯ ಶ್ರೀಪಾದ ಭಟ್ ಹಾಗೂ ಜಯಪ್ರಕಾಶ್ ಮಾವಿನಕುಳಿ ತೀರ್ಪುಗಾರರಾಗಿದ್ದರು ಎಂದು ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.