ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಅಭಿಯಾನ ಆರಂಭವಾದಾಗ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ನಿರೀಕ್ಷೆಯಿದೆ ಎಂದು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಿದರು. ಅಲ್ಲದೆ ನಾಯಕನ ಆಟವಾಡಿದ ಹಿಟ್ಮ್ಯಾನ್(60 ರನ್, ನಿವೃತ್ತಿ), ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
'ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ಬೌಲಿಂಗ್ ಮಾಡಲು ಸ್ವಲ್ಪ ಸಮಯ ಬೇಕಾಗಬಹುದು. ಅವರು ಇದುವರೆಗೆ ಬೌಲಿಂಗ್ ಆರಂಭಿಸಿಲ್ಲ. ಆದರೆ ವಿಶ್ವಕಪ್ ಅಭಿಯಾನ ಆರಂಭದ ವೇಳೆಗೆ ಬೌಲಿಂಗ್ ಮಾಡಲು ಸಜ್ಜರಾಗಿರುತ್ತಾರೆ' ಎಂದು ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆಯಲ್ಲಿಪ್ರತಿಕ್ರಿಯಿಸಿದರು.
'ನಾವು ಗುಣಮಟ್ಟದ ಬೌಲರ್ಗಳನ್ನು ಹೊಂದಿದ್ದೇವೆ. ಆದರೂ ನಮಗೆ ಆರನೇ ಬೌಲರ್ನ ಆಯ್ಕೆ ಬೇಕಿದೆ' ಎಂದು ರೋಹಿತ್ ಹೇಳಿದ್ದಾರೆ.
ಟ್ವೆಂಟಿ-20 ವಿಶ್ವಕಪ್ನಲ್ಲಿ ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.
ಏತನ್ಮಧ್ಯೆ ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಇದರಿಂದಾಗಿ ವಿಶ್ವಕಪ್ನಲ್ಲಿ ಆರನೇ ಬೌಲರ್ ಆಗಿ ವಿರಾಟ್ ಬೌಲಿಂಗ್ ಮಾಡುವರೇ ಎಂಬುದು ಕುತೂಹಲವೆನಿಸಿದೆ.