ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಕೆ ನೆನಪಿನಲ್ಲಿ ಐದನೇ ರಂಗೋತ್ಸವ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಿಜಿಕೆ ಎನ್ನುವ ಮೂರಕ್ಷರ ಅವರನ್ನು ಕಾಣದವರಿಗೂ ಆಕರ್ಷಕ. ಕನ್ನಡ ರಂಗಭೂಮಿಗೆ ನವಚೈತನ್ಯ ನೀಡಿ ಹೊಸ ಬೆಳೆಯನ್ನು ಬಿತ್ತಿದವರು ಸಿಜಿಕೆ ಎಂದೇ ಹೆಸರಾಗಿದ್ದ ಸಿ.ಜಿ. ಕೃಷ್ಣಸ್ವಾಮಿ ಅವರು. ವಿಶ್ವವಿದ್ಯಾಲಯದ ಕೆಲಸದ ನಡುವೆಯೂ ಮನದಲ್ಲಿ ಅಪಾರ ರಂಗಪ್ರೀತಿ ತುಂಬಿಕೊಂಡಿದ್ದ ಸಿಜಿಕೆ ಅದಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟವರು.

ರವೀಂದ್ರ ಕಲಾಕ್ಷೇತ್ರದ ಹಿಂದಿನ ಸಂಸ ಬಯಲು ರಂಗಮಂದಿರವಂತೂ ‘ಸಿಜಿಕೆ ಅಡ್ಡಾ’ ಅಂತಲೇ ಹೆಸರುವಾಸಿ. ಮೋಟು ಬೀಡಿ ಸೇದುತ್ತಾ, ತುಸು ಚಹಾ ಹೀರುತ್ತಾ ಸಿಜಿಕೆ ಹೇಳುತ್ತಿದ್ದ ಮಾತುಗಳನ್ನು ಕೇಳುವುದೇ ಅಂದು ರಂಗಪ್ರಿಯರಿಗೆ ಸಂಭ್ರಮವಾಗಿತ್ತು. ರಂಗಭೂಮಿಯನ್ನು ನೆಪವಾಗಿಟ್ಟುಕೊಂಡು ಜಗತ್ತಿನ ಆಗುಹೋಗುಗಳನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸುತ್ತಿದ್ದ ಸಿಜಿಕೆ ಬರೀ ಬಣ್ಣದ ಮಾತುಗಳನ್ನು ಆಡುತ್ತಿರಲಿಲ್ಲ. ಬದುಕಿನ ಮಾತೂ ಅವರಲ್ಲಿರುತ್ತಿತ್ತು. ಆ ಕಾಳಜಿಯಿಂದಲೇ ನೂರಾರು ಯುವಜನರು ರಂಗಭೂಮಿ ಒಡನಾಟದ ಮೂಲಕ ಬದುಕು ಕಟ್ಟಿಕೊಳ್ಳಲು ಗುರುವಾದರು.

ಶಶಿಧರ ಅಡಪ, ಕೃಷ್ಣ ರಾಯಚೂರು, ಬಿ. ವಿಠಲ್ (ಅಪ್ಪಯ್ಯ), ರವಿ ಎಂ., ಸರ್ವೇಶ್, ಸುದೇಶ ಮಹಾನ್... ಹೀಗೆ ಸಿಜಿಕೆ ಎಂಬ ರಂಗಮಾಂತ್ರಿಕನ ಗರಡಿಯಲ್ಲಿ ಪಳಗಿದವರು ಹಲವರು. ರಂಗ ನಿರ್ದೇಶಕ, ರಂಗ ಸಂಘಟಕ ಸೇರಿದಂತೆ  ಹತ್ತುಹಲವು ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಸಿಜಿಕೆ ಯುವಜನರನ್ನು ಅಪಾರ ಸಂಖ್ಯೆಯಲ್ಲಿ ರಂಗಭೂಮಿಗೆ ಸೆಳೆದಿದ್ದರು. ತಮ್ಮ ಮನದಲ್ಲಿ ‘ಒಡಲಾಳ’ದ ಸಾಕವ್ವನ ಅಂತಃಕರಣ ಇಟ್ಟುಕೊಂಡಿದ್ದ ಸಿಜಿಕೆ ಅವರ ವ್ಯಕ್ತಿತ್ವಕ್ಕೆ ಮನಸೋತ ಹಲವರು ನಾಟಕಕಾರರಾಗಿ, ತಂತ್ರಜ್ಞರಾಗಿ, ಕಲಾವಿದರಾಗಿ ರೂಪುಗೊಂಡರು.

ರಂಗಭೂಮಿ ನಿಂತ ನೀರಾಗಬಾರದು ನಿರಂತರವಾಗಿ ಬೆಳೆಯುತ್ತಿರಬೇಕೆಂಬ ಹಂಬಲದಿಂದ ಸಿಜಿಕೆ ಹುಟ್ಟುಹಾಕಿದ್ದ ‘ರಂಗನಿರಂತರ’ ಇಂದಿಗೂ ತನ್ನ ಮೂಲಸೆಲೆಯನ್ನು ಉಳಿಸಿ ಕೊಂಡಿದೆ. ಸಿಜಿಕೆ ಅವರನ್ನು ಗುರು, ಸ್ನೇಹಿತ, ಮಾರ್ಗದರ್ಶಿ ಹೀಗೆ ಹಲವು ರೂಪಗಳಲ್ಲಿ ಅವರನ್ನು ಅಪ್ಪಿ, ಒಪ್ಪಿಕೊಂಡಿದ್ದ ಸಮಾನ ಮನಸ್ಕರ ಗುಂಪು ‘ರಂಗನಿರಂತರ’ದ ಮೂಲಕ ಪ್ರತಿವರ್ಷವೂ ಹಮ್ಮಿಕೊಳ್ಳುತ್ತಿರುವ ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕೆ ಈಗ ಐದು ವರ್ಷಗಳ ಸಂಭ್ರಮ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಮತ್ತು ತಂಜಾವೂರು ದಕ್ಷಿಣ ವಲಯ ಸಾಂಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಏಪ್ರಿಲ್ 28ರಿಂದ ಮೇ 4ರ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗೋತ್ಸವ ನಡೆಯಲಿದೆ.

‘ರಂಗೋತ್ಸವದಲ್ಲಿ ಭಾರತೀಯ ರಂಗಭೂಮಿಯ ಬೇರೆ ಭಾಷೆಗಳ ವಿಶಿಷ್ಟ ನಾಟಕಗಳನ್ನು ಆಯ್ಕೆ ಮಾಡಿ ಆಹ್ವಾನಿಸಿ, ಕನ್ನಡ ರಂಗಭೂಮಿಗೆ ಪರಿಚಯಿಸುವ ಮತ್ತು ಕನ್ನಡ ರಂಗಭೂಮಿಯ ಕ್ರಿಯಾಶೀಲ ಕೆಲಸಗಳನ್ನು ಭಾರತೀಯ ರಂಗಭೂಮಿಗೆ  ತೋರಿಸುವ ಹೆಮ್ಮೆಯ ಕೆಲಸವನ್ನು ರಂಗನಿರಂತರ ಮಾಡುತ್ತಿದೆ’ ಎನ್ನುತ್ತಾರೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಈ ಬಾರಿಯ ಗೌರವ ನಿರ್ದೇಶಕರಾದ ಡಾ.ಡಿ.ಕೆ.ಚೌಟ.

‘ಬೆಂಗಳೂರನ್ನು ಕೇಂದ್ರೀಕರಿಸಿಕೊಂಡು ರಂಗಭೂಮಿಗೆ ಸಂಬಂಧಿಸಿದಂತೆ ರಂಗೋತ್ಸವ ನಡೆಸಬೇಕೆಂಬ ಉದ್ದೇಶದಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಆಯೋಜಿಸುತ್ತಿದ್ದೇವೆ. ದೇಶದಾದ್ಯಂತ ಯಾವ ರೀತಿಯ ಹೊಸ ಪ್ರಯೋಗಗಳಾಗುತ್ತವೆ ಎಂಬುದನ್ನು ಪರಿಚಯಿಸುವುದೇ ಇದರ ಉದ್ದೇಶ’ ಎನ್ನುತ್ತಾರೆ ಸಿಜಿಕೆ ರಂಗೋತ್ಸವದ ಸಂಚಾಲಕ ರವಿ ಎಂ.

‘ನಾನು ನಟನಾಗಬೇಕೆಂದು ರಂಗಭೂಮಿಗೆ ಬಂದವನು. ಆದರೆ, ಸಿಜಿಕೆ ನನ್ನನ್ನು ಸ್ಟೇಜ್ ಮ್ಯಾನೇಜರ್ ಮಾಡಿಬಿಟ್ಟರು. ನನಗೆ ಅದನ್ನೆಲ್ಲಾ ಹೇಗೆ ನಿರ್ವಹಿಸುವುದೆಂದು ಗೊತ್ತಿರಲಿಲ್ಲ. ಸುಮ್ಮನೆ ಎಲ್ಲರನ್ನೂ ಬೈದುಕೊಂಡು ಓಡಾಡಿಕೊಂಡಿರೋದು ಸ್ಟೇಜ್ ಮ್ಯಾನೇಜರ್ ಕೆಲಸ ಕಣಯ್ಯಾ ಅಂತ ಸಿಜಿಕೆ ತಮಾಷೆಗೆ ಹೇಳಿದ್ದರೂ, ನಿರ್ದೇಶಕನನ್ನು ಬಿಟ್ಟರೆ ಒಟ್ಟಾರೆ ಸ್ಟೇಜ್ ನಿರ್ವಹಣೆ ಸ್ಟೇಜ್ ಮ್ಯಾನೇಜರ್‌ನ ಕೆಲಸ ಎಂದು ನಂತರವೇ ಗೊತ್ತಾದದ್ದು. ಮುಂದೆ ರಂಗಭೂಮಿಯ ಎಲ್ಲಾ ಮಗ್ಗಲುಗಳಲ್ಲೂ ಆಸಕ್ತಿ ಬೆಳೆಸಿಕೊಂಡೆ. ಸಿಜಿಕೆ ಅವರಿಗೆ ಒಬ್ಬ ಮನುಷ್ಯನ ನಿಜವಾದ ಸಾಮರ್ಥ್ಯ ಏನೆಂದು ಅಂದಾಜಿಸುವ ಗುಣವಿತ್ತು. ಆ ಗುಣದಿಂದಲೇ ನೇಪಥ್ಯ ರಂಗವಷ್ಟೇ ಅಲ್ಲ ರಂಗಭೂಮಿಯ ಎಲ್ಲಾ ವಿಭಾಗಗಳಲ್ಲೂ ಅವರ ಶಿಷ್ಯರು ಕ್ರಿಯಾಶೀಲರಾಗಿ ಗುರುತಿಸಿಕೊಳ್ಳುವಂತಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ.

‘ಅಂದು ಸಿಜಿಕೆ ನನ್ನನ್ನು ಬರೀ ನಟನನ್ನಾಗಿ ಮಾಡಿದ್ದರೆ ಇಂದು ಈ ರಂಗೋತ್ಸವದ ಸಂಚಾಲಕನಾಗಿ ನಾನು ಕೆಲಸ ಮಾಡಲು ಆಗುತ್ತಿರಲಿಲ್ಲವೇನೋ? ರಂಗೋತ್ಸವಕ್ಕಾಗಿ 40ರಿಂದ 50 ನಾಟಕಗಳ ತಂಡಗಳ ಜತೆ ಸಂವಹನ ನಡೆಸಿ ಅದರಲ್ಲಿ ಉತ್ತಮವಾದ ಆರು ನಾಟಕಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಹಿಂದಿರುವುದು ಸಿಜಿಕೆ ಎಂಬ ದೈತ್ಯ ಶಕ್ತಿ. ನಾನೊಬ್ಬನೇ ಅಲ್ಲ ನನ್ನಂಥ  ಹಲವರನ್ನು ಸಿಜಿಕೆ ಗುರುತಿಸಿ, ಬೆಳೆಸಿದರು. ನಾವೆಲ್ಲಾ ಕೃಷ್ಣ ರಾಯಚೂರು ಅವರನ್ನು ಬರೀ ಕಲಾವಿದನಾಗಿ ನೋಡುತ್ತಿದ್ದ ದಿನಗಳಲ್ಲಿ ಕೃಷ್ಣ ಅವರೊಳಗಿನ ಕವಿಯನ್ನು ಗುರುತಿಸಿದ್ದ ಸಿಜಿಕೆ, ಕೃಷ್ಣ ಅವರ ಒಂದು ಕವನ ಸಂಕಲನವನ್ನೇ ಪ್ರಕಟಿಸಿಬಿಟ್ಟರು. ಅದುವೇ ಸಿಜಿಕೆ ಅವರ ವಿಶೇಷ ಗುಣ’ ಎಂದು ಸಿಜಿಕೆ ಜತೆಗಿನ ಕ್ಷಣಗಳನ್ನು ಬಿಚ್ಚಿಡುತ್ತಾರೆ.

ಸಿಜಿಕೆ ನೆನಪಿನ ರಂಗೋತ್ಸವದಲ್ಲಿ ದೇಶದ ಅತ್ಯುತ್ತಮ ಆರು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಆರು ನಾಟಕಗಳು ಭಿನ್ನ ಬಗೆಯ ವಿಷಯಗಳನ್ನು ಹೊಂದಿವೆ. ಇದರಲ್ಲಿ ಮಹಿಳೆಯರೇ ನಿರ್ದೇಶಿಸಿದ ಮೂರು ನಾಟಕಗಳಿರುವುದು ವಿಶೇಷ. ರಂಗಭೂಮಿ ಹಿನ್ನೆಲೆಯಿಂದ ಬಂದು ಬಹಳಷ್ಟು ಯುವಜನರು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಕಿರುಚಿತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರಿಗಾಗಿ ‘ಚಿತ್ರಕೂಟ’ದಲ್ಲಿ ಚಿಕ್ಕ ಸುರೇಶ್‌ ನೆನಪಿನಲ್ಲಿ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಅಂತೆಯೇ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇಂದು ಕಥೆ ಹೇಳುವುದು ಅಗತ್ಯವಿದೆ. ಇದನ್ನು ಮನಗಂಡು ಈ ಬಾರಿ
‘ಕಥಾ ಪಡಸಾಲೆ’ ಆರಂಭಿಸಿದ್ದೇವೆ. ಇಲ್ಲಿ ಕಥೆಗಳನ್ನು ಹೇಳುವವರು ಹೆಣ್ಣುಮಕ್ಕಳು’ ಎಂದು ವಿವರಿಸುತ್ತಾರೆ ರವಿ.

ನಾಟಕ ವಿಮರ್ಶಾ ಸ್ಪರ್ಧೆ

ವಿದ್ಯಾರ್ಥಿಗಳ ಆಸಕ್ತಿಯನ್ನು ನಾಟಕ ವಿಮರ್ಶೆಯತ್ತ ಸೆಳೆಯಲು ‘ಪ್ರಜಾವಾಣಿ’ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಆಶ್ರಯದಲ್ಲಿ ನಾಟಕ ವಿಮರ್ಶಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಿ.ಜಿ.ಕೆ. ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನವಾಗಲಿರುವ ವಿವಿಧ ಭಾಷೆಯ ಆರು ನಾಟಕಗಳನ್ನು ನೋಡಿ ವಿದ್ಯಾರ್ಥಿಗಳು ವಿಮರ್ಶೆ ಬರೆಯಬೇಕು. ಆಯ್ಕೆಯಾದ ಪ್ರತಿ ನಾಟಕದ ಒಂದು ವಿಮರ್ಶೆಗೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಈ ವಿಮರ್ಶೆಯನ್ನು ‘ಪ್ರಜಾವಾಣಿ’ ಪ್ರಕಟಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT