ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಯಂತಿರುವೆ... ಗಾಯಗೊಳ್ಳುತ್ತೀಯ ಎಂದು ಪಾಂಡ್ಯಗೆ ಎಚ್ಚರಿಸಿದ್ದೆ: ಅಖ್ತರ್

Last Updated 12 ಡಿಸೆಂಬರ್ 2021, 13:54 IST
ಅಕ್ಷರ ಗಾತ್ರ

ಲಾಹೋರ್‌: ‘ನೀನು ಗಾಯದ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಎಚ್ಚರದಿಂದಿರು, ಎಂದು ಭಾರತದ ಆಲ್‌ರೌಂಡರ್‌ಹಾರ್ದಿಕ್‌ ಪಾಂಡ್ಯಗೆ ನಾನು ಸಲಹೆ ನೀಡಿದ್ದೆ. ಆದರೆ, ಅವರು ಅದನ್ನು ಉಪೇಕ್ಷಿಸಿದ್ದರು. ಅದಕ್ಕೆ ಬೆಲೆಯನ್ನೂ ತೆತ್ತರು,’ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಬಹಿರಂಗಪಡಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಿಂದ ನಿರ್ಗಮಿಸಿದ ನಂತರ ಫಿಟ್‌ನೆಸ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ಪಾಂಡ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರಂತರ ಕಳಪೆ ಪ್ರದರ್ಶನ ನೀಡುವಂತಾಗಿದೆ. ಅಲ್ಲದೆ, ಟಿ20 ವಿಶ್ವಕಪ್‌ನಿಂದ ಭಾರತ ನಿರ್ಗಮಿಸುವಂತಾಗಲು ಪಾಂಡ್ಯ ಕಳಪೆ ಆಟವೂ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್, ‘ಹಾರ್ದಿಕ್ ಅವರ ಫಿಟ್‌ನೆಸ್ ಸಮಸ್ಯೆಗಳ ಬಗ್ಗೆ ಅವರಿಗೆ ಮೊದಲೇ ಹೇಳಿದ್ದೆ. ಎಚ್ಚರಿಕೆಯನ್ನೂ ನೀಡಿದ್ದೆ,’ ಎಂದಿದ್ದಾರೆ.

‘ಜಸ್ಪ್ರಿತ್‌ ಬೂಮ್ರಾ ಮತ್ತು ಪಾಂಡ್ಯ ಹಕ್ಕಿಗಳಂತೆ ತೆಳ್ಳಗಿದ್ದರು. ಅವರಿಗೆ ಬೆನ್ನಿನಲ್ಲಿ ಸ್ನಾಯುಗಳಿರಲಿಲ್ಲ. ಹೀಗಿದ್ದಾಗ ಗಾಯದ ಸಮಸ್ಯೆಗಳು ಕಾಡುತ್ತವೆ ಎಂದು ನಾನು ಅವರಿಗೆ ತಿಳಿಸಿದ್ದೆ. ಈಗಲೂ, ನನ್ನ ಭುಜದ ಹಿಂದೆ ಬಲವಾದ ಸ್ನಾಯುಗಳಿವೆ’ ಎಂದು ಅಖ್ತರ್ ಹೇಳಿದರು.

‘ನಾನು ಅವರ (ಹಾರ್ದಿಕ್) ಬೆನ್ನನ್ನು ಮುಟ್ಟಿದೆ. ಸ್ನಾಯುಗಳಿದ್ದವಾದರೂ, ತುಂಬಾ ತೆಳ್ಳಗಿದ್ದವು. ಹಾಗಾಗಿ, ‘ನೀನು ಗಾಯಗೊಳ್ಳುತ್ತೀಯ,’ ಎಂದು ಎಚ್ಚರಿಸಿದೆ. ಆದರೆ ತಾನು ಬಹಳಷ್ಟು ಕ್ರಿಕೆಟ್ ಆಡುತ್ತಿರುವುದಾಗಿ ಪಾಂಡ್ಯ ಹೇಳಿದರು. ನಾನು ಎಚ್ಚರಿಕೆ ಕೊಟ್ಟು ಸರಿಯಾಗಿ ಒಂದೂವರೆ ಗಂಟೆಯಾಗಿರಲಿಲ್ಲ, ಅವರು ಗಾಯದ ಸಮಸ್ಯೆಗೆ ತುತ್ತಾದರು,’ ಎಂದು ವಿವರಿಸಿದರು.

ಇದೇ ಕಾರಣಕ್ಕೆ, ಬೆನ್ನಿನಲ್ಲಿ ಸ್ನಾಯುಗಳನ್ನು ಬೆಳೆಸಿಕೊಳ್ಳುವಂತೆ ನಾನು ಹಾರ್ದಿಕ್‌ಗೆ ಹೇಳಿದ್ದೆ ಎಂದೂ ಅಖ್ತರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT