ಅಹಮದಾಬಾದ್: ಅಹಮದಾಬಾದ್ನಲ್ಲಿ ನಡೆದ ಐದನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದ ವೇಳೆ ಭಾರತ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ನ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ನಡುವೆ ವಾಗ್ವಾದ ನಡೆದಿದೆ.
ಭಾರತ ಒಡ್ಡಿದ 225 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಒಂದು ಹಂತದಲ್ಲಿ 12.4 ಓವರ್ಗಳಲ್ಲಿ 130 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಜೋಸ್ ಬಟ್ಲರ್ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯದಲ್ಲಿ ಭಾರತ ತಿರುಗೇಟು ನೀಡಲು ನೆರವಾದರು.
ಈ ವೇಳೆ ಪೆವಿಲಿಯನ್ಗೆ ಹೆಜ್ಜೆ ಹಾಕುತ್ತಿದ್ದ ಜೋಸ್ ಬಟ್ಲರ್ ಮತ್ತು ವಿರಾಟ್ ಕೊಹ್ಲಿ ನಡುವೆ ಜಟಾಪಟಿ ನಡೆಯಿತು. ಜೋಸ್ ಬಟ್ಲರ್ ಹಿಂದೆ ತಿರುಗಿ ಕೊಹ್ಲಿಯತ್ತ ಪದ ಪ್ರಯೋಗ ಮಾಡುತ್ತಿದ್ದರು.
ಈ ಘಟನೆಯ ಹಿಂದಿನ ನಿಖರ ಕಾರಣವೇನು ಎಂಬುದು ತಿಳಿದಿಲ್ಲ. ಕೊನೆಗೆ ಫೀಲ್ಡ್ ಅಂಪೈರ್ ಮಧ್ಯೆ ಪ್ರವೇಶಿಸಿ ಭಾರತ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಸಮಾಲೋಚನೆ ನಡೆಸುವುದು ಕಂಡುಬಂದಿತ್ತು.
34 ಎಸೆತಗಳನ್ನು ಎದುರಿಸಿದ ಬಟ್ಲರ್ ಎರಡು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದ್ದರು. ಬಟ್ಲರ್ ವಿಕೆಟ್ ಪತನವು ಪಂದ್ಯಕ್ಕೆ ತಿರುವನ್ನು ನೀಡಿತ್ತು. ಅಂತಿಮವಾಗಿ 36 ರನ್ ಅಂತರದಿಂದ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಸರಣಿಯನ್ನು 3-2ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.