ತಿರುವನಂತಪುರ: ಸರಣಿಯಲ್ಲಿ ಕ್ಲೀನ್ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿರುವ ಭಾರತ ತಂಡದಲ್ಲಿ ಭಾನುವಾರ ಶ್ರೀಲಂಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ.
ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡವೂ 2–0ಯಿಂದ ಮುಂದಿದೆ. ಇದರಿಂದಾಗಿ ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶ ಕೊಟ್ಟು ಎರಡೂ ಪಂದ್ಯಗಳಲ್ಲಿ ಆಡಿದವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗದಲ್ಲಿ ಪ್ರಮುಖವಾಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಬಹುದು. ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಟೆಸ್ ಸರಣಿ ನಡೆಯಲಿದ್ದು, ಬೂಮ್ರಾ ಇನ್ನೂ ಫಿಟ್ ಆಗದ ಕಾರಣ ಶಮಿ ಅವರ ದೈಹಿಕ ಕ್ಷಮತೆ ಕಾಪಾಡುವ ಉದ್ದೇಶದಿಂದ ಈ ಕ್ರಮಕ್ಕೆ ತಂಡವು ಮುಂದಾಗಬಹುದು.
ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಸ್ಪಿನ್ನರ್ ಕುಲದೀಪ್ ಯಾದವ್, ಸಿರಾಜ್ ಮತ್ತು ಉಮ್ರಾನ್ ಅವರಿಗೆ ಮತ್ತೊಂದು ಅವಕಾಶ ಸಿಗಬಹುದು. ಪಂದ್ಯ ನಡೆಯಲಿರುವ ಗ್ರೀನ್ಫೀಲ್ಡ್ ಪಿಚ್ ಗುಣಲಕ್ಷಣಕ್ಕೆ ಅಗತ್ಯವಾದರೆ ಎಡಗೈ ವೇಗಿ ಆರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಳ್ಳಬಹುದು.
ಕಳೆದ ಸರಣಿಯಲ್ಲಿ ಉತ್ತಮವಾಗಿ ಆಡಿದ್ದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಗೆ ಎರಡೂ ಪಂದ್ಯಗಳಲ್ಲಿ ವಿಶ್ರಾಂತಿ ಕೊಡಲಾಗಿತ್ತು. ‘ವರ್ಕ್ಲೋಡ್ ನಿರ್ವಹಣೆ’ ವ್ಯವಸ್ಥೆಯ ಅನುಸಾರ ಈ ಪಂದ್ಯಕ್ಕೂ ಅವರಿಗೆ ಅವಕಾಶ ಸಿಗುವುದು ಅನುಮಾನ.
ಲಂಕಾ ತಂಡದ ನಾಯಕ ದಸುನ್ ಶನಕಾ ಹಾಗೂ ಬೌಲರ್ಗಳು ಉತ್ತಮ ಲಯದಲ್ಲಿದ್ದಾರೆ. ಟಿ20 ಸರಣಿಯನ್ನು ಭಾರತವು ಕ್ಲೀನ್ಸ್ವೀಪ್ ಮಾಡಿಕೊಳ್ಳಲು ಬಿಟ್ಟಿರಲಿಲ್ಲ. ಈ ಸರಣಿಯಲ್ಲಿಯೂ ಕೊನೆಯ ಪಂದ್ಯವನ್ನು ಜಯಿಸಿದ ಸಮಾಧಾನದೊಂದಿಗೆ ತವರಿಗೆ ಮರಳುವ ಇರಾದೆಯಲ್ಲಿದೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಆರ್ಷದೀಪ್ ಸಿಂಗ್.
ಶ್ರೀಲಂಕಾ: ದಸುನ್ ಶನಕಾ (ನಾಯಕ), ಕುಶಾಲ ಮೆಂಡಿಸ್ (ಉಪನಾಯಕ), ಪಥುಮ್ ನಿಸಾಂಕ, ಅವಿಷ್ಕಾ ಫರ್ನಾಂಡೊ, ಸದೀರಾ ಸಮರವಿಕ್ರಂ, ಚರಿತಾ ಅಸಲಂಖಾ, ಧನಂಜಯ್ ಡಿ ಸಿಲ್ವಾ, ವಣಿಂದು ಹಸರಂಗಾ, ಆಶನ್ ಭಂಡಾರ, ಮಹೀಶ್ ತೀಕ್ಷಣ, ಚಮಿಕಾ ಕರುಣಾರತ್ನೆ, ದಿಲ್ಶಾನ್ ಮಧುಶಂಕಾ, ಕಸುನ್ ರಜಿತಾ, ನುವಾನಿದು ಫರ್ನಾಂಡೊ, ದುನಿತ್ ವೆಳಾಲಗೆ, ಪ್ರಮೋದ್ ಮಧುಶಾನ್, ಲಹೀರು ಕುಮಾರ.
ಪಂದ್ಯ ಆರಂಭ: ಮಧ್ಯಾಹ್ನ 1.30
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.