ಹುಬ್ಬಳ್ಳಿ: 66 ಓವರ್ಗಳಲ್ಲಿ 6 ವಿಕೆಟ್ಗೆ 229 ರನ್ ಗಳಿಸಿರುವ ಭಾರತ ‘ಎ’ ತಂಡವು ಡಿಕ್ಲೇರ್ ಮಾಡಿಕೊಂಡಿದೆ. ನಾಲ್ಕು ದಿನಗಳ ‘ಟೆಸ್ಟ್‘ ಪಂದ್ಯದ ಎರಡು ದಿನಗಳ ಆಟವು ಮಳೆಯಿಂದಾಗಿ ರದ್ದುಗೊಂಡಿತ್ತು.
ಮಳೆ ಅವಕಾಶ ನೀಡಿದರೆ, ಪ್ರವಾಸಿ ಕಿವೀಸ್ ತಂಡವು ಬ್ಯಾಟಿಂಗ್ ನಡೆಸಲಿದೆ.
ಮೂರು ಸರಣಿಗಳ ಎರಡನೇ ‘ಟೆಸ್ಟ್‘ನ ಮೊದಲ ದಿನದ ಆಟ ಮಳೆಯಿಂದ ರದ್ದಾಗಿತ್ತು. ಎರಡನೇ ದಿನವೂ ಆಗಾಗ ಮಳೆ ಕಾಡಿದರೂ, 66 ಓವರ್ ಗಳ ಆಟ ನಡೆದಿತ್ತು. ಮೂರನೇ ದಿನದ ಆಟವೂ ರದ್ದುಗೊಂಡಿತ್ತು. ಭಾನುವಾರ ಕೊನೆಯ ದಿನದ ಆಟ ಬಾಕಿಯಿದ್ದು, ಮಧ್ಯಾಹ್ನದ ತನಕ ಮಳೆಯಿಂದ ಆಟ ನಡೆದಿಲ್ಲ.
ನಿಲ್ಲದ ತುಂತುರು ಮಳೆ: ಆರಂಭವಾಗದ ದಿನದಾಟ
ಹುಬ್ಬಳ್ಳಿ: ಭಾರತ ’ಎ‘ ಹಾಗೂ ನ್ಯೂಜಿಲೆಂಡ್ ‘ಎ‘ ತಂಡಗಳ ನಡುವಣ ನಡುವಣ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಭಾನುವಾರವೂ ಮಳೆ ಅಡ್ಡಿಯಾಗಿದೆ.
ಬೆಳಿಗ್ಗೆ 11.30ಕ್ಕೆ ಮೈದಾನದ ಸ್ಥಿತಿಗತಿ ಪರಿಶೀಲನೆ ನಡೆಸಿ, ಆಟ ಆರಂಭಿಸುವುದಾಗಿ ಅಂಪೈರ್ಗಳು ಹಾಗೂ ಪಂದ್ಯದ ರೆಫರಿ ಪ್ರಕಟಿಸಿದ್ದಾರೆ.
ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನವು ಮೈದಾನದ ತೇವಾಂಶ ಹಾಗೂ ಮಳೆಯ ಕಾರಣಕ್ಕೆ ರದ್ದುಗೊಂಡಿತ್ತು. ಎರಡನೇ ದಿನ ಆಗಾಗ ಮಳೆ ಕಾಡಿದ್ದರಿಂದ ಕೇವಲ 66 ಓವರ್ ಆಟವಷ್ಟೇ ನಡೆದಿತ್ತು.
ಟಾಸ್ ಸೋಲು ಬ್ಯಾಟಿಂಗ್ ನಡೆಸುತ್ತಿರುವ ಭಾರತವು ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್ಗಳಲ್ಲಿ 6 ವಿಕೆಟ್ಗಳಿಗೆ 229 ರನ್ ಗಳಿಸಿ ಆಡುತ್ತಿದೆ. ವಿಕೆಟ್ ಕೀಪರ್ ಕೆ.ಎಸ್.ಭರತ್ 74 ರನ್ ಹಾಗೂ ರಾಹುಲ್ ಚಾಹರ್ 4 ರನ್ಗಳಿಸಿ ಆಡುತ್ತಿದ್ದಾರೆ. ಆಟ ಆರಂಭಗೊಂಡರೆ ಭಾನುವಾರ ಭರತ್ ಸ್ಟ್ರೈಕ್ನಲ್ಲಿ ಇರುವರು.
ಮೂರನೇ ದಿನವಾದ ಶನಿವಾರವೂ ಇಡೀ ದಿನದ ಆಟವು ಮಳೆಯಿಂದಾಗಿ ರದ್ದುಗೊಂಡಿತ್ತು. ಮೂರು ‘ಟೆಸ್ಟ್‘ ಪಂದ್ಯಗಳ ಸರಣಿ ಎರಡನೇ ಪಂದ್ಯ ಇದಾಗಿದೆ. ಮೊದಲ ಟೆಸ್ಟ್ ಬೆಂಗಳೂರಿನಲ್ಲಿ ನಡೆದಿತ್ತು. ಡ್ರಾನಲ್ಲಿ ಅಂತ್ಯಕಂಡಿತ್ತು.