ಪುರುಲಿಯಾ (ಪಶ್ಚಿಮ ಬಂಗಾಳ): ‘ವಿದ್ಯುತ್ ಪ್ರಸರಣ ಗೋಪುರದಲ್ಲಿ ನೇತಾಡುವ ಸ್ಥಿತಿಯಲ್ಲಿ ಶನಿವಾರ ಮೃತದೇಹ ಪತ್ತೆಯಾಗಿದ್ದು ಇದು ಆತ್ಮಹತ್ಯೆ ಎಂಬುದನ್ನು ಮರಣೋತ್ತರ ಪರೀಕ್ಷೆ ದೃಢಪಡಿಸಿದೆ’ ಎಂದು ಪುರುಲಿಯಾ ಎಸ್ಪಿ ಆಕಾಶ್ ಮೇಘರಿಯಾ ಭಾನುವಾರ ಹೇಳಿದ್ದಾರೆ.
ಆದರೆ ಈ ವ್ಯಕ್ತಿಯು ಪಕ್ಷದ ಕಾರ್ಯಕರ್ತನಾಗಿದ್ದು, ರಾಜಕೀಯ ದ್ವೇಷದಿಂದ ಆತನನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೆ ಭಾನುವಾರ 12 ಗಂಟೆಗಳ ಅವಧಿಗೆ ಜಿಲ್ಲೆಯಲ್ಲಿ ಬಂದ್ ಕರೆ ನೀಡಿದ್ದರಿಂದ ಜನಜೀವನ ಭಾಗಶಃ ಅಸ್ತವ್ಯಸ್ತಗೊಂಡಿತ್ತು.
‘ಮೃತ ವ್ಯಕ್ತಿಯನ್ನು ದುಲಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ತಂಡ ನೆರವೇರಿಸಿದೆ. ನೇಣು ಬಿಗಿದ ಕಾರಣ ಉಸಿರುಗಟ್ಟಿ ಕುಮಾರ್ ಮೃತಪಟ್ಟಿದ್ದಾರೆ. ಹೀಗಾಗಿ ಇದು ಆತ್ಮಹತ್ಯೆ ಎಂಬುದಾಗಿ ಮರಣೋತ್ತರ ಪರೀಕ್ಷೆ ಹೇಳಿದೆ’ ಎಂದು ಆಕಾಶ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ, ಬಿಜೆಪಿ ಕಾರ್ಯಕರ್ತ ಎನ್ನಲಾದ ಮಹತೋ ದೇಹ ಸಹ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ‘ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಕ್ಕೆ ಶಿಕ್ಷೆ’ ಎಂಬುದಾಗಿ ಬರೆದಿದ್ದ, ಸಹಿ ಇರದ ಪತ್ರವೊಂದೂ ಶವದ ಬಳಿ ಸಿಕ್ಕಿತ್ತು.