ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಶನಿವಾರ ಮುಕ್ತಾಯಗೊಂಡ ಟಿ20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಬೌಲಿಂಗ್ ಮಾಡಿ ಮುಗಿಸದ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವನೆಯ ಶೇಕಡಾ 40 ಭಾಗವನ್ನು ದಂಡದ ರೂಪದಲ್ಲಿ ನೀಡಬೇಕಾಗಿದೆ.
ನಿಗದಿ ಮಾಡಿದ ಅವಧಿ ಮುಕ್ತಾಯಗೊಂಡಾಗ ಭಾರತ ತಂಡ ಇನ್ನೂ ಎರಡು ಓವರ್ ಮಾಡುವುದು ಬಾಕಿ ಇತ್ತು ಎಂದು ಪಂದ್ಯದ ಅಂಪೈರ್ಗಳಾಗಿದ್ದ ಅನಿಲ್ ಚೌಧರಿ, ನಿತಿನ್ ಮೆನೋನ್ ಮತ್ತು ಕೆ.ಎನ್.ಅನಂತಪದ್ಮನಾಭನ್ ವರದಿ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ರೆಫರಿ ಜಾವಗಲ್ ಶ್ರೀನಾಥ್ ಮುಂದಾದರು.
ಆಟಗಾರರು ಮತ್ತು ನೆರವು ಸಿಬ್ಬಂದಿಯ ಕರ್ತವ್ಯಗಳಿಗೆ ಸಂಬಂಧಿಸಿದ ಐಸಿಸಿಯ ನಿಯಮ 2.22ರ ಅಡಿಯಲ್ಲಿ ದಂಡ ವಿಧಿಸಲಾಗಿದೆ. ತಪ್ಪನ್ನು ನಾಯಕ ಕೊಹ್ಲಿ ಒಪ್ಪಿಕೊಂಡಿದ್ದು ಸಮರ್ಪಕ ಕಾರಣವನ್ನೂ ನೀಡಿದ್ದಾರೆ. ಹೀಗಾಗಿ ಈ ಸಂಬಂಧ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ರೆಫರಿ ತಿಳಿಸಿದ್ದಾರೆ.
ಪಂದ್ಯದಲ್ಲಿ ಭಾರತ 36 ರನ್ಗಳಿಂದ ಜಯ ಗಳಿಸಿ ಐದು ಪಂದ್ಯಗಳ ಸರಣಿಯನ್ನು 3–2ರಲ್ಲಿ ಗೆದ್ದುಕೊಂಡಿತ್ತು.