ಪಲ್ಲೆಕೆಲೆ: ಭಾರತ ಮಹಿಳಾ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಲಂಕಾ ವಿರುದ್ಧದ ಟಿ20 ಸರಣಿಯನ್ನು 2–1 ರಲ್ಲಿ ಜಯಿಸಿದ್ದ ಭಾರತ, ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ಗಳ ಗೆಲುವು ಪಡೆದಿತ್ತು. ಗೆಲುವಿನ ಓಟ ಮುಂದುವರಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆಯುವುದು ತಂಡದ ಗುರಿ.
ಆರಂಭಿಕ ಬ್ಯಾಟರ್ಗಳು ಇನ್ನೂ ಲಯ ಕಂಡುಕೊಳ್ಳದೇ ಇರುವುದು ಭಾರತ ತಂಡದ ಚಿಂತೆಗೆ ಕಾರಣವಾಗಿದೆ. ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮ ಅವರು ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದಾರೆ.
ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಆಲ್ರೌಂಡ್ ಆಟದ ಮೂಲಕ ತಂಡದ ಗೆಲುವಿಗೆ ನೆರವಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಹರ್ಲೀನ್ ಡಿಯೊಲ್, ದೀಪ್ತಿ ಶರ್ಮ ಮತ್ತು ರೇಣುಕಾ ಸಿಂಗ್ ಉತ್ತಮ ಆಟ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ಮತ್ತೊಂದೆಡೆ ಲಂಕಾ ತಂಡ ಸರಣಿ ಸೋಲು ತಪ್ಪಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ನಾಯಕಿ ಚಾಮರಿ ಅಟಪಟ್ಟು, ಹಸಿನಿ ಪೆರೇರಾ ಮತ್ತು ನೀಲಾಕ್ಷಿ ಡಿ’ಸಿಲ್ವಾ ಅವರಿಂದ ಉತ್ತಮ ಆಟ ನಿರೀಕ್ಷಿಸುತ್ತಿದೆ.
ಶ್ರೀಲಂಕಾ ತಂಡ ಕಳೆದ ತಿಂಗಳು ಪಾಕಿಸ್ತಾನದ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿತ್ತು. ಸತತ ಎರಡನೇ ಸರಣಿ ಸೋಲು ತಪ್ಪಿಸುವ ಸವಾಲು ಆತಿಥೇಯ ತಂಡದ ಮುಂದಿದೆ.