ಬೆಂಗಳೂರು: ವಿಶ್ವ ಪರಿಸರ ದಿನ ಆಚರಣೆಯ ಮೂಲಕ 2018 ಮತ್ತು 19ನೇ ಸಾಲಿನಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ‘ಮಗುವಿಗೊಂದು ಮರ, ಶಾಲೆಗೊಂದು ವನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ವಿಶ್ವ ಪರಿಸರ ದಿನದಿಂದ ಆಗಸ್ಟ್ ಕೊನೆಯವರೆಗೆ ಪ್ರತಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿ ತಂಡದಿಂದ ಭವಿಷ್ಯದಲ್ಲಿ ಉಪಯುಕ್ತವಾಗುವ, ನೆರಳು ನೀಡುವ ಹಾಗೂ ಫಲ ಕೊಡುವ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು. ಕ್ರೀಡಾ ಮೈದಾನ ಬಿಟ್ಟು, ಶಾಲೆಗೆ ಸೇರಿದ ಇತರ ಜಾಗದಲ್ಲಿ ಆಲಂಕಾರಿಕ ಗಿಡಗಳು, ಹೂವು, ಹಣ್ಣಿನ ಗಿಡಗಳು, ಸ್ಥಳೀಯ ಉಪಯುಕ್ತ ಸಸ್ಯಗಳನ್ನು ಸಮೀಪದ ತೋಟಗಾರಿಕೆ ಇಲಾಖೆಯಿಂದ ಪಡೆದು ಹಸಿರೀಕರಣ ಹೆಚ್ಚಿಸುವಂತೆ
ನೋಡಿಕೊಳ್ಳುವುದಾಗಿ ಸುತ್ತೋಲೆ ತಿಳಿಸಿದೆ.
ಬಿಸಿಯೂಟಕ್ಕೆ ಅಗತ್ಯವಾದ ತರಕಾರಿ, ಸೊಪ್ಪು ಸೇರಿದಂತೆ ಕರಿಬೇವು, ತೆಂಗು, ನುಗ್ಗೇಕಾಯಿ ಬೆಳೆದು ‘ಶಾಲಾ ಕೈತೋಟ’ ನಿರ್ಮಿಸಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದು ಕೂಡ ಇದರಲ್ಲಿ ಸೇರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.