ನವದೆಹಲಿ: ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯ (ಫೆರಾ) ಪ್ರಕರಣಗಳಲ್ಲಿ ನೋಟಿಸ್ಗೆ ಪ್ರತಿಕ್ರಿಯೆ ನೀಡದ ‘ಘೋಷಿತ ಅಪರಾಧಿ’, ಉದ್ಯಮಿ ವಿಜಯ ಮಲ್ಯ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ದೆಹಲಿಯ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ಆದೇಶಿಸಿದೆ.
ಆಸ್ತಿಗಳನ್ನು ಬೆಂಗಳೂರು ಪೊಲೀಸ್ ಆಯುಕ್ತರು ಮುಟ್ಟುಗೋಲು ಹಾಕಿಕೊಳ್ಳಬೇಕು. ಇದರ ಬಗ್ಗೆ ಮೇ 8ರ ಒಳಗೆ ವರದಿ ನೀಡಬೇಕು ಎಂದು ನ್ಯಾಯಾಧೀಶ ದೀಪಕ್ ಶೆರಾವತ್ ಹೇಳಿದ್ದಾರೆ.
ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯವು ಅರ್ಜಿ ಸಲ್ಲಿಸಿತ್ತು.
ಫೆರಾ ಉಲ್ಲಂಘನೆಯ ಪ್ರಕರಣಗಳಲ್ಲಿ ಹಲವು ಬಾರಿ ನೋಟಿಸ್ ನೀಡಿದ್ದರೂ ಮಲ್ಯ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ಅವರನ್ನು ‘ಘೋಷಿತ ಅಪರಾಧಿ’ ಎಂದು ಜನವರಿ 4ರಂದು ಇದೇ ನ್ಯಾಯಾಲಯ ಆದೇಶ ನೀಡಿತ್ತು.