ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ಜೂ.19ರಂದು ಮೆಟ್ರೊ ರೈಲು ಸೇವೆಯನ್ನು ಮಧ್ಯರಾತ್ರಿವರೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ನಿರ್ಧರಿಸಿದೆ.
ಕೊನೆಯ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳಿಂದ ಅಂದು ರಾತ್ರಿ 1 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಹೊರಡಲಿವೆ ಎಂದು ತಿಳಿಸಿದೆ.
ಪೇಪರ್ ಟಿಕೆಟ್: ‘ವಾಪಸ್ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದ್ದು, ನೂಕುನುಗ್ಗಲು ತಪ್ಪಿಸಲು ಮುಂಚಿತವಾಗಿಯೇ ಪೇಪರ್ ಟಿಕೆಟ್ಗಳನ್ನು ನೀಡಲಾಗುವುದು. ಮಧ್ಯಾಹ್ನ 3 ಗಂಟೆಯಿಂದಲೇ ಪೇಪರ್ ಟಿಕೇಟ್ಗಳು ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಲಭ್ಯವಾಗಲಿವೆ. ₹50 ದರದ ಪೇಪರ್ ಟಿಕೆಟ್ ಪಡೆದವರು ಕಬ್ಬನ್ ಪಾರ್ಕ್ ಮೆಟ್ರೊ ರೈಲು ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 10 ಗಂಟೆ ನಂತರ ಪ್ರಯಾಣಿಸಬಹುದು’ ಎಂದು ವಿವರಿಸಿದೆ.
‘ಪಂದ್ಯ ನೋಡಲು ಬರುವಾಗ ಎಂದಿನಂತೆ ಸ್ಮಾರ್ಟ್ಕಾರ್ಡ್ ಮತ್ತು ಟೋಕನ್ಗಳನ್ನು ಪಡೆದು ಪ್ರಯಾಣಿಸಬೇಕು. ವಾಪಸ್ ಹೋಗಲು ಪೇಪರ್ ಟಿಕೆಟ್ಗಳನ್ನು ಮಾತ್ರ ಬಳಸಲು ಅವಕಾಶ ಇದೆ’ ಎಂದು ತಿಳಿಸಿದೆ.
ಕ್ರಿಕೆಟ್ ಪಂದ್ಯ: ಬಿಎಂಟಿಸಿಯಿಂದ ಹೆಚ್ಚುವರಿ ಬಸ್
ಬೆಂಗಳೂರು: ಕ್ರಿಕೆಟ್ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಜನರ ಅನುಕೂಲಕ್ಕಾಗಿ ಜೂನ್ 19ರಂದು ಹೆಚ್ಚುವರಿ ಬಸ್ಗಳ ಸೇವೆ ಒದಗಿಸಲು ಬಿಎಂಟಿಸಿ ನಿರ್ಧರಿಸಿದೆ.
ಮಧ್ಯಾಹ್ನ 3ರಿಂದ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ಒದಗಿಸಲಾಗುತ್ತದೆ. ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (ಎಚ್ಎಎಲ್ ರಸ್ತೆ, ಹೂಡಿ ರಸ್ತೆ), ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಕೆಂಗೇರಿ ಕೆಎಚ್ಬಿ ಕಾಲೊನಿ(ಎಂಸಿಟಿಸಿ-ನಾಯಂಡಹಳ್ಳಿ), ಜನಪ್ರಿಯ ಟೌನ್ಶಿಪ್ (ಮಾಗಡಿ ರಸ್ತೆ), ನೆಲಮಂಗಲ, ಯಲಹಂಕ 5ನೇ ಹಂತ, ಆರ್.ಕೆ. ಹೆಗಡೆನಗರ (ನಾಗವಾರ, ಟ್ಯಾನರಿ ರಸ್ತೆ), ಬಾಗಲೂರು(ಹೆಣ್ಣೂರು ರಸ್ತೆ) ಮತ್ತು ಹೊಸಕೋಟೆಗೆ ಬಸ್ಗಳು ಕಾರ್ಯಾಚರಣೆ ಮಾಡಲಿವೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.