ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ವಿರುದ್ಧ T20 ಸರಣಿ ಜಯದ ತವಕ; ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

Last Updated 7 ಜನವರಿ 2023, 13:19 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡವು ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

ಮುಂಬೈನಲ್ಲಿ ಜನವರಿ 3ರಂದು ನಡೆದ ಮೊದಲ ಪಂದ್ಯವನ್ನು ಎರಡು ರನ್ ಅಂತರದಿಂದ ಗೆದ್ದಿದ್ದ ಭಾರತ, ಪುಣೆಯಲ್ಲಿ ಜನವರಿ 5ರಂದು ನಡೆದ ಎರಡನೇ ಪಂದ್ಯದಲ್ಲಿ 16 ರನ್ ಅಂತರದ ಸೋಲು ಅನುಭವಿಸಿತ್ತು. ಹೀಗಾಗಿ ಸರಣಿ ಗೆಲ್ಲಲು ಉಭಯ ತಂಡಗಳು ಇಂದು ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ.

ಯುವ ಬೌಲರ್‌ಗಳ ಅಸ್ಥಿರ ಪ್ರದರ್ಶನವೇ ಪುಣೆಯಲ್ಲಿ ಗುರುವಾರ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಉಮ್ರಾನ್‌ ಮಲಿಕ್‌ ಮತ್ತು ಶಿವಂ ಮಾವಿ ಅವರನ್ನು ಲಂಕಾ ಬ್ಯಾಟರ್‌ಗಳು ನಿರಾಯಾಸವಾಗಿ ಎದುರಿಸಿದ್ದರು. ಇಬ್ಬರೂ ಉತ್ತಮ ಲೈನ್‌ ಮತ್ತು ಲೆಂಗ್ತ್‌ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದರು.

ಎಡಗೈ ವೇಗಿ ಆರ್ಷದೀಪ್‌ ಸಿಂಗ್‌ ಅವರೂ ಎಂದಿನ ಲಯದಲ್ಲಿ ಬೌಲ್‌ ಮಾಡಿರಲಿಲ್ಲ. ಎರಡು ಓವರ್‌ಗಳಲ್ಲಿ ಐದು ನೋಬಾಲ್‌ ಎಸೆದಿದ್ದರು. ಆದಷ್ಟು ಬೇಗ ತಪ್ಪುಗಳನ್ನು ತಿದ್ದಿಕೊಳ್ಳುವ ಸವಾಲು ವೇಗದ ಬೌಲರ್‌ಗಳ ಮುಂದಿದೆ.

ಯುವ ಆಟಗಾರರು ಅನುಭವ ಪಡೆಯಲಿ ಎಂಬ ಉದ್ದೇಶದಿಂದ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ.

ಭಾರತ ತಂಡವನ್ನು ಕಾಡುತ್ತಿರುವ ಇನ್ನೊಂದು ಚಿಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ. ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರೆತಿಲ್ಲ. ಶುಭಮನ್‌ ಗಿಲ್‌ ಕ್ರಮವಾಗಿ 7 ಹಾಗೂ 5 ರನ್‌ ಗಳಿಸಿ ಔಟಾಗಿದ್ದರು.

ಅಕ್ಷರ್‌ ಪಟೇಲ್‌ ಅವರ ಆಲ್‌ರೌಂಡ್‌ ಆಟ ತಂಡದ ಬಲ ಹೆಚ್ಚಿಸಿದೆ. ರವೀಂದ್ರ ಜಡೇಜ ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಎಲ್ಲ ಸೂಚನೆಗಳನ್ನು ಅಕ್ಷರ್‌ ನೀಡಿದ್ದಾರೆ. ಪುಣೆಯಲ್ಲಿ ನಡೆದಿದ್ದ ಪಂದ್ಯದಲ್ಲಿ 24 ರನ್‌ಗಳಿಗೆ ಎರಡು ವಿಕೆಟ್‌ ಪಡೆದಿದ್ದ ಅವರು ಆ ಬಳಿಕ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 31 ಎಸೆತಗಳಲ್ಲಿ 65 ರನ್‌ ಪೇರಿಸಿದ್ದರು.

ಮತ್ತೊಂದೆಡೆ ಶ್ರೀಲಂಕಾ ತಂಡ ಆತ್ಮವಿಶ್ವಾಸದಲ್ಲಿದ್ದು, ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ರಾಜ್‌ಕೋಟ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದು, ಬೃಹತ್‌ ಮೊತ್ತದ ಹೋರಾಟ ನಿರೀಕ್ಷಿಸಲಾಗಿದೆ.

ಆಡುವ ಹನ್ನೊಂದರ ಬಳಗ
ಭಾರತ:
ಇಶಾನ್ ಕಿಶನ್ (ವಿಕೆಟ್‌–ಕೀಪರ್), ಶುಭಮನ್‌ ಗಿಲ್, ಸೂರ್ಯಕುಮಾರ್ ಯಾದವ್‌, ರಾಹಲ್‌ ತ್ರಿಪಾಠಿ, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್‌ ಹೂಡ, ಅಕ್ಷರ್ ಪಟೇಲ್‌, ಶಿವಂ ಮಾವಿ, ಉಮ್ರಾನ್ ಮಲಿಕ್, ಅರ್ಶದೀಪ್‌ ಸಿಂಗ್, ಯುಜುವೇಂದ್ರ ಚಾಹಲ್‌

ಶ್ರೀಲಂಕಾ: ಪಾಥುಮ್ ನಿಸ್ಸಾಂಕ, ಕುಶಾಲ್ ಮೆಂಡಿಸ್ (ವಿಕೆಟ್‌–ಕೀಪರ್), ಅವಿಷ್ಕಾ ಫೆರ್ನಾಂಡೊ, ಧನಂಜಯ ಡಿ ಸಿಲ್ವ, ಚರಿತ್‌ ಅಸಲಂಕಾ, ದಾಸುನ್‌ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್‌ ತೀಕ್ಷಣ, ಕುಶಾಲ್‌ ರಜಿತಾ, ದಿಲ್ಶಾನ್‌ ಮದುಶಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT