ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಅವರು ಏಷ್ಯಾಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ರಾಹುಲ್ ಹೋದ ಮೇ ತಿಂಗಳಿನಲ್ಲಿ ತೋಡೆ ಸ್ನಾಯುವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದಿದ್ದರು. ಅದರ ನಂತರ ವಿಶ್ರಾಂತಿ ಮತ್ತು ಪುನಶ್ಚೇತನಕ್ಕಾಗಿ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವುಳಿದಿದ್ದರು. ಇದೀಗ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಯಾಗಿದ್ದರು.
ಆದರೆ ಸ್ನಾಯುವಿನಲ್ಲಿ ಸಣ್ಣ ಪ್ರಮಾಣದ ನೋವು ಇದ್ದ ಕಾರಣ ಅವರಿಗೆ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗುತ್ತಿದೆ. ಅವರ ಬದಲಿಗೆ ಎರಡನೇ ವಿಕೆಟ್ಕೀಪರ್ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಲಭಿಸುವುದು ಖಚಿತವಾಗಿದೆ.
ಶ್ರೇಯಸ್ ಅಯ್ಯರ್ ಕೂಡ ಅಂತಿಮ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಬಹುದು ಎಂದು ತಂಡದ ಮೂಲಗಳು ಹೇಳಿವೆ.
ಮಧ್ಯಮ ಕ್ರಮಾಂಕದ ಸವಾಲು
ಕೆ.ಎಲ್. ರಾಹುಲ್. ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರು ಗಾಯಗೊಂಡ ಕಾರಣ ಭಾರತ ತಂಡದ ಮಧ್ಯಮಕ್ರಮಾಂಕವನ್ನು ಬಲಗೊಳಿಸುವ ಕಾರ್ಯಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಅವರ ಸ್ಥಾನ ತುಂಬುವವರಿಗಾಗಿ ಪ್ರಯೋಗಗಳನ್ನು ನಡೆಸುವುದು ಅನಿವಾರ್ಯವಾಗಿದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಭಾರತ ಕ್ರಿಕೆಟ್ ತಂಡದ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಆಡುವ ಆಟಗಾರರು ಯಾರು ಎಂಬುದು 18 ತಿಂಗಳುಗಳ ಹಿಂದೆಯೇ ನಿರ್ಧಾರವಾಗಿತ್ತು. ಆದರೆ ದುರದೃಷ್ಟವಶಾತ್ ಆ ಬ್ಯಾಟರ್ಗಳು ಗಾಯಗೊಂಡ ಕಾರಣ ಹೊಸಬರನ್ನು ಹುಡುಕುವ ಕಾರ್ಯ ನಡೆಸಬೇಕಾಯಿತು‘ ಎಮದರು.
‘ಎರಡು ತಿಂಗಳುಗಳ ಅವಧಿಯಲ್ಲಿ ಮೂವರೂ ಗಾಯಗೊಂಡಿದ್ದು ದುದದೃಷ್ಟಕರ. ಈ ಪರಿಸ್ಥಿತಿಯನ್ನು ನಿಭಾಯಸಲು ಕೆಲವು ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ಮಾಡಿದೆವು. ಮುಂಬರುವ ವಿಶ್ವಕಪ್ ಟೂರ್ನಿಗೂ ಈ ಮೂವರು ಫಿಟ್ ಆಗದಿದ್ದರೆ ಬೇರೆ ಆಯ್ಕೆಗಳು ನಮ್ಮ ಮುಂದಿರಬೇಕು ಎಂಬ ಕಾರಣಕ್ಕೆ ಪ್ರಯೋಗ ಅನಿವಾರ್ಯವಾಗಿತ್ತು‘ ಎಂದರು.
ಹೋದ ವರ್ಷದ ಡಿಸೆಂಬರ್ನಲ್ಲಿ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಇನ್ನೂ ಪುನಶ್ಚೇತನದಲ್ಲಿದ್ದಾರೆ. ಅವರು ಇನ್ನೂ ಕಣಕ್ಕೆ ಮರಳಿಲ್ಲ. ಅಕ್ಟೋಬರ್ 5ರಿಂದ ಭಾರತದ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡವು ಶ್ರೀಲಂಕಾಕ್ಕೆ ಬುಧವಾರ ಪ್ರಯಾಣಿಸಲಿದೆ. ಕಳೆದ ಒಂದು ವಾರದಿಂದ ತಂಡವು ಆಲೂರಿನಲ್ಲಿರುವ ಕೆಎಸ್ಸಿಎ ಮೈದಾನದಲ್ಲಿ ಅಭ್ಯಾಸ ನಡೆಸಿತು. ಇಲ್ಲಿಯೇ ಯೋ ಯೋ ಫಿಟ್ನೆಸ್ ಟೆಸ್ಟ್ ಕೂಡ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.