ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ಮಹಿಳೆಯರ ತಂಡಗಳ ನಡುವಿನ ಟ್ವೆಂಟಿ–20 ಕ್ರಿಕೆಟ್ ಪಂದ್ಯವೂ ಶುಕ್ರವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ಸರಣಿ ಗೆಲುವಿನ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.
ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ಅವರನ್ನು ಕೈಬಿಟ್ಟದ್ದು ವಿವಾದಕ್ಕೆ ಕಾರಣವಾಗಿತ್ತು. ಅವರು ತಂಡದಲ್ಲಿದ್ದರೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು ಎಂಬ ಮಾತು ಕೇಳಿಬಂದಿತ್ತು. 160 ರನ್ಗಳ ಗುರಿ ಬೆನ್ನತ್ತಿದ್ದ ಭಾರತ ಎರಡನೇ ವಿಕೆಟ್ಗೆ 98 ರನ್ ಸೇರಿಸಿತ್ತು. ಆದರೂ ಪಂದ್ಯ ಸೋತಿತ್ತು. ದಾಖಲೆ ಮಾಡಿದ ಸ್ಮೃತಿ ಮಂದಾನ ಮತ್ತು ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರ ಪತನದ ನಂತರ ತಂಡಕ್ಕೆ ಎದುರಾಳಿ ಬೌಲರ್ಗಳ ದಾಳಿಯನ್ನು ಮೆಟ್ಟಿ ನಿಲ್ಲಲು ಆಗಲಿಲ್ಲ.
ಚೊಚ್ಚಲ ಪಂದ್ಯ ಆಡಿದ್ದ ಪ್ರಿಯಾ ಪೂನಿಯಾ ನಾಲ್ಕು ರನ್ ಗಳಿಸಿ ಔಟಾಗಿದ್ದರು. ಮತ್ತೊಬ್ಬ ಭರವಸೆಯ ಆಟಗಾರ್ತಿ ದಯಾಳನ್ ಹೇಮಲತಾ ಕೂಡ ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. 2020ರ ವಿಶ್ವಕಪ್ಗೆ ಯುವ ಆಟಗಾರ್ತಿಯರ ತಂಡ ಕಟ್ಟಲು ಮುಂದಾಗಿರುವುದರಿಂದ ಮಿಥಾಲಿಗೆ ಅವಕಾಶ ನೀಡಲಿಲ್ಲ ಎಂದು ತಂಡದ ಆಡಳಿತ ಹೇಳಿತ್ತು. ಆದರೆ ನಿರಾಸೆ ಕಂಡ ಕಾರಣ ಈಗ ಅವರನ್ನು ಕಣಕ್ಕೆ ಇಳಿಸಲು ಮುಂದಾಗಲಿದೆ ಎನ್ನಲಾಗಿದೆ. ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ಲಯಕ್ಕೆ ಮರಳಬೇಕಾಗಿದೆ.