ಪಠಾಣ್ಕೋಟ್: ದರೋಡೆಕೋರರು ನಡೆಸಿದ ದಾಳಿಯಿಂದಾಗಿ ಸುರೇಶ್ ರೈನಾ ಅವರ ಸಂಬಂಧಿಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯು ಜಿಲ್ಲೆಯ ಥರಿಯಾಲ್ ಎಂಬ ಹಳ್ಳಿಯಲ್ಲಿ ಆಗಸ್ಟ್ 19–20 ಮಧ್ಯರಾತ್ರಿ ವೇಳೆ ನಡೆದಿದೆ ಎನ್ನಲಾಗಿದೆ.
ಮೃತರನ್ನು ಸರ್ಕಾರಿ ಗುತ್ತಿಗೆದಾರನಾಗಿರುವಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ಅಶೋಕ್ ಅವರ ಮನೆಯಲ್ಲಿ ಲೂಟಿ ಮಾಡಲು ಯೋಜಿಸಿದ್ದಕುಖ್ಯಾತ ಕಾಳೆ ಕಚ್ಛೇವಾಲಾ ಗ್ಯಾಂಗ್ನ ಮೂರು–ನಾಲ್ಕು ಮಂದಿ, ದಾಳಿ ನಡೆಸಿದ್ದರು. ಈ ವೇಳೆ ತಲೆಗೆ ಗಂಭೀರ ಗಾಯವಾಗಿದ್ದ ಅಶೋಕ್ ಅವರು, ಮೃತಪಟ್ಟಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಶೋಕ್ ಅವರು ಮೃತಪಟ್ಟಿರುವುದನ್ನು ಪಠಾಣ್ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ ಖಚಿತಪಡಿಸಿದ್ದಾರೆ. ಅಶೋಕ್ ಅವರು ಕ್ರಿಕೆಟಿಗ ರೈನಾ ಅವರ ಸಂಬಂಧಿಯೇ ಎಂಬುದನ್ನು ಗುಲ್ನೀತ್ ಖಚಿತಪಡಿಸಿಲ್ಲ. ಆದರೆ, ಸಂಬಂಧಿಯಾಗಿರಬಹದು ಎಂದಷ್ಟೇ ಹೇಳಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದೂ ತಿಳಿಸಿದ್ದಾರೆ.
ದರೋಡೆಕೋರರು ಮನೆಯಲ್ಲಿದ್ದ ಹಣ ಹಾಗೂ ಚಿನ್ನವನ್ನು ದೋಚಿದ್ದಾರೆ. ಮೃತ ಕುಮಾರ್ ಅವರ 80 ವರ್ಷದ ತಾಯಿ ಸತ್ಯದೇವಿ, ಪತ್ನಿ ಆಶಾದೇವಿ, ಮಕ್ಕಳಾದ ಅಪಿನ್ ಮತ್ತು ಕೌಶಲ್ ಅವರಿ ಗಾಯಗಳಾಗಿವೆ.
ಸದ್ಯಸತ್ಯದೇವಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.