ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಅಪಾರ; ರಾಣಾ–ಸಿಂಗ್ ಆಟಕ್ಕೆ ಸಚಿನ್ ಮೆಚ್ಚುಗೆ

Last Updated 25 ಅಕ್ಟೋಬರ್ 2020, 12:21 IST
ಅಕ್ಷರ ಗಾತ್ರ

ಐಪಿಎಲ್‌ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದ ಆಟಗಾರ ಮನ್‌ದೀಪ್‌ ಸಿಂಗ್‌ ಮತ್ತು ಕೋಲ್ಕತ ನೈಟ್‌ರೈಡರ್ಸ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಕ್ರೀಡಾ ಪ್ರೇಮಿಗಳ ಮನ ಗೆದ್ದರು. ರಾಣಾ ಅವರ ಮಾವ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ನಿಧನರಾಗಿದ್ದರು. ಮನ್‌ದೀಪ್‌ ಸಿಂಗ್ ತಂದೆಯವರೂ ಅದೇ ದಿನ ಮೃತಪಟ್ಟಿದ್ದರು. ಆದಾಗ್ಯೂ ರಾಣಾ ಮತ್ತು ಮನ್‌ದೀಪ್‌ ತಮ್ಮ ತಂಡಗಳ ಪರ ಕಣಕ್ಕಿಳಿದಿದ್ದರು.

ಈ ಬಗ್ಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ನೋವಾಗುತ್ತದೆ. ಆದರೆ, ಅಂತಿಮ ವಿದಾಯ ಹೇಳಲೂ ಸಾಧ್ಯವಾಗದಿರುವುದು ಹೃದಯವಿದ್ರಾವಕ. ಈ ದುರಂತದ ನೋವಿನಿಂದ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಆಟಕ್ಕೆ ಇಂದು ಮರಳಿರುವುದಕ್ಕೆ ಹ್ಯಾಟ್ಸ್‌ಆಫ್‌. ಚೆನ್ನಾಗಿ ಆಡಿದ್ದೀರಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬಿರುಸಿನ ಬ್ಯಾಟಿಂಗ್‌ ಮಾಡಿದ್ದ ನಿತೀಶ್‌ ರಾಣಾ, ಕೇವಲ 53 ಎಸೆತಗಳಲ್ಲಿ 81 ರನ್‌ ಬಾರಿಸಿದ್ದರು. ಅವರ ಆಟದ ಬಲದಿಂದ ಕೆಕೆಆರ್‌, ನಿಗದಿತ 20 ಓವರ್‌ಗಳಲ್ಲಿ 195 ರನ್ ಕಲೆಹಾಕಿತ್ತು. ಈ ಪಂದ್ಯದಲ್ಲಿ ಕೆಕೆಆರ್ 59 ರನ್ ಅಂತರದ ಗೆಲುವು ಸಾಧಿಸಿತು.

ರಾಣಾ ಅರ್ಧಶತಕದ ರನ್‌ ಬಾರಿಸಿದ ಬಳಿಕ ಅವರ ಮಾವ ‘ಸುರೀಂದರ್‌’ ಹೆಸರಿನ ಜೆರ್ಸಿ ತೊಟ್ಟು ಆಡುವ ಮೂಲಕ ಕ್ರೀಡಾಂಗಣದಲ್ಲಿ ಭಾವುಕ ಗೌರವ ಸಮರ್ಪಿಸಿದ್ದರು.

ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದ ಮನ್‌ದೀಪ್‌ 17 ರನ್ ಗಳಿಸಿದರು. ಪಂದ್ಯದಲ್ಲಿ ಕಿಂಗ್ಸ್‌ ಪಡೆ, ರೈಸರ್ಸ್‌ ಬಳಗವನ್ನು 12 ರನ್‌ ಅಂತರದಿಂದ ಮಣಿಸಿತ್ತು.

1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದ ವಿಶ್ವಕಪ್‌ ವೇಳೆ ಸಚಿನ್‌ ಅವರ ತಂದೆ ಮೃತಪಟ್ಟಿದ್ದರು. ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದ ಸಚಿನ್‌, ಇಂಗ್ಲೆಂಡ್‌ಗೆ ವಾಪಸ್‌ ಆಗಿದ್ದರು. ನಿರ್ಣಾಯಕ ಎನಿಸಿದ್ದ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT