ದುಬೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿ ‘ಗುರು–ಶಿಷ್ಯ’ರು ಮುಖಾಮುಖಿ ಯಾಗುತ್ತಿದ್ದಾರೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭಾನುವಾರ ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.
ಈ ಟೂರ್ನಿಯ ಲೀಗ್ ಹಂತದಲ್ಲಿ ಎರಡೂ ಬಾರಿ ರಿಷಭ್ ತಮ್ಮ ‘ಗುರು’ವಿನ ಬಳಗಕ್ಕೆ ಸೋಲಿನ ರುಚಿ ತೋರಿಸಿದ್ದಾರೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್ ಪ್ರವೇಶಿಸಿರುವ ಡೆಲ್ಲಿ ಬಳಗವು ಈ ಬಾರಿ ಟ್ರೋಫಿ ಜಯಿಸುವ ಛಲದಲ್ಲಿದೆ. ಹೋದ ಸಲ ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಪಂತ್ ಬಳಗ ಮುಗ್ಗರಿಸಿತ್ತು.
ಆ ವರ್ಷ ಧೋನಿ ಬಳಗವು ಪ್ಲೇ ಆಫ್ ಕೂಡ ಪ್ರವೇಶಿಸದೇ ನಿರ್ಗಮಿಸಿತ್ತು. ಈಗ ಒಟ್ಟು 18 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಕ್ವಾಲಿಫೈಯರ್ ಕಣಕ್ಕಿಳಿ ಯುತ್ತಿದೆ. ತಂಡದ ಯುವ ಮತ್ತು ಅನುಭವಿಗಳು ಉತ್ತಮ ಫಾರ್ಮ್ನಲ್ಲಿ ರುವುದು ನಾಯಕನ ಆತ್ಮವಿಶ್ವಾಸ ಹೆಚ್ಚಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಋತುರಾಜ್ ಗಾಯಕವಾಡ್, ಫಫ್ ಡುಪ್ಲೆಸಿ, ಅಂಬಟಿ ರಾಯುಡು ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆದರೆ, ಸುರೇಶ್ ರೈನಾ ಮತ್ತು ಧೋನಿ ಬ್ಯಾಟಿಂಗ್ ಲಯ ಕಂಡುಕೊಂಡರೆ ತಂಡ ಮತ್ತಷ್ಟು ಬಲಿಷ್ಠವಾಗುತ್ತದೆ. ಮೋಯಿನ್ ಅಲಿ, ರವೀಂದ್ರ ಜಡೇಜ ಮತ್ತು ಶಾರ್ದೂಲ್ ಠಾಕೂರ್ ಆಲ್ರೌಂಡ್ ಆಟವೂ ತಂಡದ ಯಶಸ್ಸಿನಲ್ಲಿ ಪ್ರಮುಖ ವಾಗಿದೆ. ಆದರೆ ಲೀಗ್ ಹಂತದ ಕೊನೆಯ ಮೂರು ಪಂದ್ಯಗಳಲ್ಲಿ ಧೋನಿ ಬಳಗವು ಸೊತಿತ್ತು.
ಆ ಸೋಲುಗಳಲ್ಲಿ ಆಗಿರುವ ಲೋಪಗಳನ್ನು ತಿದ್ದಿಕೊಂಡರೆ ಡೆಲ್ಲಿ ಎದುರು ಪುಟಿದೇಳಬಹುದು.
ಹೋದ ವಾರ ನಡೆದಿದ್ದ ಉಭಯ ತಂಡಗಳ ಮುಖಾಮುಖಿಯಲ್ಲಿ ಚೆನ್ನೈ ತಂಡವು ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ನೀಡಿತ್ತು. ಈ ಪಂದ್ಯದಲ್ಲಿ ಅವರಿಗೆ ಮತ್ತೊಂದು ಸಲ ತಮ್ಮ ಪ್ರತಿಭೆ ಸಾಬೀತು ಮಾಡುವ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕು.
ಡೆಲ್ಲಿ ತಂಡವೂ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತ್ತು. ಬೆಂಗಳೂರು ತಂಡವು ಶ್ರೀಕರ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಅರ್ಧಶತಕಗಳ ಬಲದಿಂದ ರೋಚಕ ಜಯ ಸಾಧಿಸಿತ್ತು. ಡೆಲ್ಲಿ ತಂಡದ ಬೌಲರ್ಗಳು ಕೊನೆಯ ಹಂತದ ಓವರ್ಗಳಲ್ಲಿ ಮುಗ್ಗರಿಸಿದ್ದರು. ಅದರಲ್ಲೂ ಕೊನೆಯ ಓವರ್ನಲ್ಲಿ ಜಯ ಕೈತಪ್ಪಿತ್ತು.
ಬ್ಯಾಟಿಂಗ್ನಲ್ಲಿ ಆರಂಭಿಕ ಜೋಡಿ ಶಿಖರ್ ಮತ್ತುಪೃಥ್ವಿ ಉತ್ತಮ ಲಯದಲ್ಲಿದ್ದಾರೆ.
ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಕೂಡ ಉತ್ತಮವಾಗಿ ಆಡುತ್ತಿದ್ಧರೆ. ಆರ್. ಅಶ್ವಿನ್ ಆಲ್ರೌಂಡ್ ಆಟ ಮತ್ತು ಆವೇಶ್ ಖಾನ್ ಬೌಲಿಂಗ್ನಲ್ಲಿ ಯಶಸ್ಸಿನ ಓಟ ಮುಂದುವರಿಸಿದರೆ ರಿಷಭ್ ಬಳಗಕ್ಕೆ ಫೈನಲ್ಗೆ ರಹದಾರಿ ಖಚಿತ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.