ಚೆನ್ನೈ: ಟೀಮ್ ಇಂಡಿಯಾದ ಯುವ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹಳೆಯ ಹಾಗೂ ಹೊಸ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಹಿಂದೊಮ್ಮೆ ಅಸ್ಥಿರ ಬ್ಯಾಟಿಂಗ್ ಪ್ರದರ್ಶನ ಹಾಗೂ ಕಳಪೆ ವಿಕೆಟ್ ಕೀಪಿಂಗ್ನಿಂದಾಗಿ ರಿಷಭ್ ಪಂತ್ ಅವರು ಸಾಕಷ್ಟು ಟ್ರೋಲ್ಗೆ ಗುರಿಯಾಗಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೆಳೆಯುವ ಕಾಲಘಟ್ಟದಲ್ಲೇ ಮಹಾನ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಹೋಲಿಕೆ ಮಾಡಲಾಗಿತ್ತು.
ಆದರೆ ಬೆಟ್ಟದಷ್ಟು ಎತ್ತರದ ಅಭಿಮಾನಿಗಳ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಪಂತ್ ಯಶಸ್ವಿಯಾಗಿರಲಿಲ್ಲ. ಪರಿಣಾಮ ಭಾರಿ ಟೀಕೆಯನ್ನು ಎದುರಿಸಬೇಕಾಯಿತು. ಅತ್ಯಂತ ಕಠಿಣ ಸಮಯದಲ್ಲೂ ಸಂಯಮವನ್ನು ಕಾಪಾಡಿರುವ ರಿಷಭ್ ಪಂತ್, ಈಗ ತಮ್ಮ ನೈಜ ಸಾಮರ್ಥ್ಯವನ್ನು ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಐಪಿಎಲ್ನಲ್ಲಿ ನಾಯಕರಾದ ಮೊದಲ ಪಂದ್ಯದಲ್ಲೇ ಗುರು ಧೋನಿ ನೇತೃತ್ವದ ಚೆನ್ನೈ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಗೆಲುವಿನ ರನ್ ಬಾರಿಸಿದ ಬಳಿಕ ಪಂತ್ ಚೆನ್ನೈ ತಂಡದ ಆಟಗಾರರ ಮಧ್ಯೆ ರಾಜನಂತೆ ಪೆವಿಲಿಯನ್ಗೆ ಹೆಜ್ಜೆ ಹಾಕುತ್ತಿರುವ ಚಿತ್ರವು ವೈರಲ್ ಆಗಿದೆ.
ಇದೇ ಸಂದರ್ಭದಲ್ಲಿ ಪಂತ್ ಅವರ ಹಳೆಯ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿದೆ. ಹಿಂದೊಮ್ಮೆ ಡೆಲ್ಲಿ ಆಟಗಾರನಾಗಿರುವ ಹೊರತಾಗಿಯೂ ಚೆನ್ನೈವಿಜಯೋತ್ಸವದಲ್ಲಿ ಪಂತ್ ಭಾಗಿಯಾಗಿದ್ದರು. ಈಗ ಅದೇ ಪಂತ್ ನೇತೃತ್ವದಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ದರ್ಬಾರ್ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಮೊನಿಕಾ ಎಂಬವವರು, 'ಇತರರ ಯಶಸ್ಸಿನಲ್ಲಿ ಖುಷಿಪಡುವುದನ್ನು ಕಲಿತುಕೊಳ್ಳಿ, ನಿಮ್ಮ ಸಮಯ ಖಂಡಿತವಾಗಿಯೂ ಬರಲಿದೆ' ಎಂದು ರಿಷಭ್ ಪಂತ್ ಅವರ ಹಳೆಯ ಹಾಗೂ ಹೊಸ ಚಿತ್ರವನ್ನು ಶೇರ್ ಮಾಡಿ ಉಲ್ಲೇಖಿಸಿದ್ದಾರೆ.
ಅಷ್ಟಕ್ಕೂ ಪಂತ್ ಅದೃಷ್ಟ ಬದಲಾಗಿರುವುದು ಕಾಂಗಾರೂ ನಾಡಲ್ಲಿ. ಏಕದಿನ ಹಾಗೂ ಟ್ವೆಂಟಿ-20 ತಂಡದಲ್ಲಿ ಅವಕಾಶ ವಂಚಿತರಾಗಿದ್ದ ಪಂತ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಸ್ಮರಣೀಯ ಟೆಸ್ಟ್ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತದಾ ಬಳಿಕ ತಾಯ್ನಾಡಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲೂ ತಮ್ಮ ತಾಕತ್ತು ಮೆರೆದಿದ್ದರು. ಈಗ ಎಲ್ಲ ಮೂರು ಪ್ರಕಾರದ ಕ್ರಿಕೆಟ್ನಲ್ಲೂ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.