ನಾಗಪುರ (ಪಿಟಿಐ): ಬಲಿಷ್ಠ ಬ್ಯಾಟಿಂಗ್ ಬಳಗವನ್ನು ಹೊಂದಿರುವ ವಿದರ್ಭ ತಂಡ ಭಾರತ ಇತರೆ ತಂಡದವರ ನಿರೀಕ್ಷೆಯನ್ನು ಹುಸಿಗೊಳಿಸಿದರು. ಎದುರಾಳಿ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಆತಿಥೇಯರು ಇರಾನಿ ಕಪ್ ಗೆದ್ದು ಸಂಭ್ರಮಿಸಿದರು.
ಸತತ ಎರಡನೇ ಬಾರಿ ರಣಜಿ ಚಾಂಪಿಯನ್ನರಾದ ವಿದರ್ಭ, ಇರಾನಿ ಕಪ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿತ್ತು. ನಾಲ್ಕನೇ ದಿನವಾದ ಶುಕ್ರವಾರ 280 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ್ದ ತಂಡ ನಾಯ ಕನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ದಿನವಾದ ಶನಿವಾರ ಗೆಲುವಿಗೆ 243 ರನ್ ಬೇಕಾಗಿತ್ತು. ಹೀಗಾಗಿ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ಇತರೆ ತಂಡ ಭರವಸೆಯಲ್ಲಿತ್ತು.
ಆದರೆ ಶುಕ್ರವಾರ ಔಟಾಗದೇ ಉಳಿದಿದ್ದ ಸಂಜಯ್ ರಾಮಸ್ವಾಮಿ ಮತ್ತು ಅಥರ್ವ ತಾಯ್ಡೆ ಕ್ರೀಸ್ನಲ್ಲಿ ಭದ್ರವಾಗಿ ತಳವೂರಿ ರಹಾನೆ ಬಳಗಕ್ಕೆ ನಿರಾಸೆ ಮೂಡಿಸಿದರು.
ಇವರಿಬ್ಬರು ಔಟಾದ ನಂತರ ಗಣೇಶ್ ಸತೀಶ್ ಮತ್ತು ಮೋಹಿತ್ ಕಾಳೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಆದರೆ ಜಯಕ್ಕೆ 11 ರನ್ ಬೇಕಾಗಿ ದ್ದಾಗ ಗಣೇಶ್ ಸತೀಶ್ ಔಟಾದರು. ಈ ಸಂದರ್ಭದಲ್ಲಿ ಪಂದ್ಯವನ್ನು ಡ್ರಾದಲ್ಲಿ ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ವಿದರ್ಭ ಪ್ರಶಸ್ತಿ ತನ್ನದಾಗಿ ಸಿಕೊಂಡಿತು.
ಈ ಮೂಲಕ ಸತತ ಎರಡು ಬಾರಿ ಚಾಂಪಿಯನ್ ಆದ ಮೂರನೇ ತಂಡ ಎನಿಸಿಕೊಂಡಿತು. ಕರ್ನಾಟಕ ಮತ್ತು ಮುಂಬೈ ಈ ಹಿಂದೆ ಈ ಸಾಧನೆ ಮಾಡಿದ್ದವು.
ಉಭಯ ತಂಡಗಳ ನಾಯಕರ ಈ ನಡೆ ಚರ್ಚೆಗೆ ಗ್ರಾಸವಾಗಿದೆ. ಓವರ್ಗಳು ಮತ್ತು ದಿನದಾಟ ಮುಕ್ತಾಯಕ್ಕೆ ಸಾಕಷ್ಟು ಸಮಯ ಇದ್ದಾಗ ನಾಯಕರು ಈ ನಿರ್ಧಾರ ಕೈಗೊಂಡದ್ದು ಅಚ್ಚರಿ ಮೂಡಿಸಿದೆ. ಅಂಪೈರ್ಗಳು ಇದಕ್ಕೆ ಒಪ್ಪಿಗೆ ನೀಡಿದ್ದು ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ. ಬಿಸಿಸಿಐ ನಿಯಮ (16.1.6) ಪ್ರಕಾರ ಈ ರೀತಿ ಪಂದ್ಯ ಮುಕ್ತಾಯಗೊಳಿಸಲು ಅವಕಾಶ ಇಲ್ಲ!
ಅಜಿಂಕ್ಯ ರಹಾನೆ, ಹನುಮ ವಿಹಾರಿ, ಮಯಂಕ್ ಅಗರವಾಲ್ ಮತ್ತು ಶ್ರೇಯಸ್ ಅಯ್ಯರ್ ಮುಂತಾದವರನ್ನು ಒಳಗೊಂಡ ಭಾರತ ಇತರೆ ತಂಡವನ್ನು ವಾಸಿಂ ಜಾಫರ್ ಮತ್ತು ಉಮೇಶ್ ಯಾದವ್ ಅವರ ಅನುಪಸ್ಥಿತಿಯಲ್ಲಿ ವಿದರ್ಭ ಎದುರಿಸಿತ್ತು. ಆದರೆ ಸಂಘಟಿತ ಹೋರಾಟ ನಡೆಸಿದ ತಂಡ ಕೆಚ್ಚೆದೆಯಿಂದ ಆಡಿತು.
ಹಿರಿಯ ಆಟಗಾರ ಗಣೇಶ್ ಸತೀಶ್ (87; 168 ಎಸೆತ, 1 ಸಿಕ್ಸರ್, 9 ಬೌಂಡರಿ) ಮತ್ತು 19 ವರ್ಷದ ಅಥರ್ವ ತಾಯ್ಡೆ (72; 185 ಎಸೆತ, 1 ಸಿಕ್ಸರ್, 8 ಬೌಂಡರಿ) ಎದುರು ಭಾರತ ಇತರೆ ತಂಡದ ಬೌಲರ್ಗಳು ನಿರುತ್ತರರಾದರು. ಆರಂಭಿಕ ಬ್ಯಾಟ್ಸ್ಮನ್ ಸಂಜಯ್ ರಾಮಸ್ವಾಮಿ ಮತ್ತು ಐದನೇ ಕ್ರಮಾಂಕದ ಮೋಹಿತ್ ಕಾಳೆ ಕೂಡ ತಂಡದ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶುಕ್ರವಾರ ಒಂದು ವಿಕೆಟ್ಗೆ 37 ರನ್ ಗಳಿಸಿದ್ದ ವಿದರ್ಭದ ಪರ ಸಂಜಯ್ ರಾಮಸ್ವಾಮಿ ಮತ್ತು ತಾಯ್ಡೆ ಎಡರನೇ ವಿಕೆಟ್ಗೆ 116 ರನ್ ಸೇರಿಸಿದರು. ರಾಮಸ್ವಾಮಿ ತಾಳ್ಮೆಯ ಬ್ಯಾಟಿಂಗ್ ಮಾಡಿದರೆ ತಾಯ್ಡೆ ಆಕ್ರಮಣಕಾರಿ ಆಟದ ಮೂಲಕ ಮಿಂಚಿದರು. ಯುವ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಈ ಜೊತೆಯಾಟವನ್ನು ಮುರಿದರು. ನಂತರ ಗಣೇಶ್ ಸತೀಶ್ ಆಕರ್ಷಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ಗಳನ್ನು ದಂಡಿಸಿದರು. ಅವರು ಔಟಾದ ಕೂಡಲೇ ಪಂದ್ಯ ಡ್ರಾಗೊಳಿಸಲು ಉಭಯ ತಂಡಗಳ ನಾಯಕರು ನಿರ್ಧರಿಸಿದರು.
ಪ್ರಶಸ್ತಿ ಮೊತ್ತ ಯೋಧರ ಕುಟುಂಬಗಳಿಗೆ
ವಿದರ್ಭ ತಂಡವು ಪ್ರಶಸ್ತಿ ಮೊತ್ತವನ್ನು ಸಂಪೂರ್ಣವಾಗಿ ಆತ್ಮಾಹುತಿ ದಾಳಿಗೆ ಬಲಿಯಾದ ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ. ಪಂದ್ಯದ ಪ್ರಶಸ್ತಿ ಪ್ರದಾನದ ನಂತರ ತಂಡದ ನಾಯಕ ಫೈಜ್ ಫಜಲ್ ಈ ವಿಷಯ ತಿಳಿಸಿದರು.
‘ವೀರ ಯೋಧರ ಕುಟುಂಬಗಳಿಗಾಗಿ ತಂಡ ಮತ್ತು ವಿದರ್ಭ ಕ್ರಿಕೆಟ್ ಸಂಸ್ಥೆ ಮಾಡುವ ಸಣ್ಣ ಕಾರ್ಯ ಇದು’ ಎಂದು ನಾಯಕ ಫೈಜಲ್ ಫಜಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.