ಬೆಂಗಳೂರು: ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.
ಹಾಲಿ ಚಾಂಪಿಯನ್ ಕರ್ನಾಟಕ ಮತ್ತು ಪಂಜಾಬ್ ತಂಡಗಳು ಎಲೀಟ್ ಎ ಗುಂಪಿನಿಂದ ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದುಕೊಂಡಿವೆ. ಜನವರಿ 26ರಿಂದ ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ಎಂಟರ ಘಟ್ಟದ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನೂ ಇಲ್ಲಿಯೇ ಆಯೋಜಿಸಲಾಗಿದೆ.
ಲೀಗ್ ಹಂತದಲ್ಲಿ ಕರ್ನಾಟಕ ತಂಡವು ಪಂಜಾಬ್ ಎದುರು ಸೋತಿತ್ತು. ಉಳಿದ ಎಲ್ಲ ಪಂದ್ಯಗಳಲ್ಲಿಯೂ ಗೆದ್ದಿತ್ತು.
’ತಂಡವು ಗುರುವಾರ ಅಹಮದಾಬಾದಿಗೆ ತೆರಳಿದೆ. ಅಲ್ಲಿ ಮೂರು ದಿನಗಳ ಕ್ವಾರಂಟೈನ್ನಲ್ಲಿ ಇರಲಿವೆ. ಕೋವಿಡ್ ತಡೆಗಾಗಿ ಬಯೋಬಬಲ್ ನಿಯಮಾವಳಿ ಇರುವುದರಿಂದ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ‘ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಕ್ತಾರ ವಿನಯ್ ಮೃತ್ಯುಂಜಯ ’ಪ್ರಜಾವಾಣಿ‘ಗೆ ತಿಳಿಸಿದರು.
ಕ್ವಾರ್ಟರ್ಫೈನಲ್ ವೇಳಾಪಟ್ಟಿ
ಕರ್ನಾಟಕ– ಪಂಜಾಬ್ (ಜ.26), ತಮಿಳುನಾಡು –ಹಿಮಾಚಲಪ್ರದೇಶ (ಜ.26), ಹರಿಯಾಣ – ಬರೋಡ (ಜ.27), ಬಿಹಾರ–ರಾಜಸ್ಥಾನ (ಜ.27). ಮೊದಲ ಮತ್ತು ಎರಡನೇ ಸೆಮಿಫೈನಲ್ ಪಂದ್ಯಗಳು (ಜ.29) ಮತ್ತು ಫೈನಲ್ (ಜ. 31).