ಬೆಂಗಳೂರು: ‘ಮದುವೆ ರಜೆ’ ಮುಗಿಸಿರುವ ಕರುಣ್ ನಾಯರ್ ತಂಡಕ್ಕೆ ಮರಳಿದ್ದಾರೆ. ಇದೇ 27ರಿಂದ ದೆಹಲಿಯಲ್ಲಿ ರೈಲ್ವೆಸ್ ವಿರುದ್ಧ ನಡೆಯಲಿರುವ ರಣಜಿ ಪಂದ್ಯದಲ್ಲಿ ಅವರು ಕರ್ನಾಟಕ ತಂಡವನ್ನು ಮುನ್ನಡೆಸುವರು.
ಬುಧವಾರ ತಂಡವನ್ನು ಪ್ರಕಟಿಸಲಾಗಿದೆ. ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಅವರಿಗೆ ಇದರಲ್ಲಿ ಸ್ಥಾನ ನೀಡಿಲ್ಲ.
‘ಗೌತಮ್ ಫಿಟ್ನೆಸ್ ಟೆಸ್ಟ್ ಶೀಘ್ರದಲ್ಲಿ ನಡೆಯಲಿದೆ. ಅವರು ಅದರಲ್ಲಿ ಫಿಟ್ ಎಂದು ಸಾಬೀತಾದರೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಇಲ್ಲದಿದ್ದರೆ ಎಡಗೈ ಸ್ಪಿನ್ನರ್ ಜೆ. ಸುಚಿತ್ ಸ್ಥಾನ ಪಡೆಯುವರು’ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.