ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆ ಕಾರ್ಯಗತಕ್ಕೆ ಆದ್ಯತೆ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ– ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ
Last Updated 9 ಜೂನ್ 2018, 10:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ಬಯಲುಸೀಮೆಯ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಸ್‌.ಪ್ರಕಾಶ್‌ (ಬೆಳ್ಳಿಪ್ರಕಾಶ್‌) ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ತಮ್ಮದೇ ಆದ ಕಾರ್ಯಸೂಚಿ ಇಟ್ಟುಕೊಂಡಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿರುವ ಅವರು ಸಮಸ್ಯೆಗಳ ಆಳ–ಅಗಲ ತಿಳಿದುಕೊಂಡು ಅವುಗಳನ್ನು ಪರಿಹರಿಸಲು ಸಜ್ಜಾಗಿದ್ದಾರೆ. ಆದ್ಯತೆಗಳು, ಗುರಿಗಳು, ಯೋಜನೆಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದ್ದಾರೆ.

ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಹಾಕಿಕೊಂಡಿರುವ ರೂಪುರೇಷೆಗಳೇನು?

ಕ್ಷೇತ್ರದಲ್ಲಿನ ಕೆರೆಗಳನ್ನು ತುಂಬಿಸಲು ಶಾಶ್ವತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಸವಾಲು ಇದೆ. ನೀರಾವರಿ ಯೋಜನೆ ನಿಟ್ಟಿನಲ್ಲಿ ಹಿಂದಿನ ಶಾಸಕ ವೈಎಸ್‌ವಿ ದತ್ತ ಮತ್ತು ರೈತ ಸಂಘಟನೆಗಳವರು ಕೈಗೊಂಡಿರುವ ಯೋಜನೆಗಳನ್ನು ಮುಂದುವರಿಸಿ, ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ. ಭದ್ರಾ ಮೇಲ್ದಂಡೆ, ಎತ್ತಿನ ಹೊಳೆ, ಹೆಬ್ಬೆ ತಿರುವು ಯೋಜನೆಗಳ ಕುರಿತು ಮುಖ್ಯಮಂತ್ರಿ, ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಉದ್ಯೋಗ ಸೃಷ್ಟಿಗೆ ಯಾವ ರೀತಿಯ ಕಾರ್ಯಸೂಚಿ ಹಾಕಿಕೊಂಡಿದ್ದೀರಿ?

ಯುವಜನರು ಉದ್ಯೋಗ ಅರಸಿ ಪಟ್ಟಣಗಳಿಗೆ ತೆರಳುತ್ತಾರೆ. ಕ್ಷೇತ್ರದಲ್ಲಿ ಕೈಗಾರಿಕೆಗಳು ಇಲ್ಲದಿರುವುದರಿಂದ ದುಡಿಮೆಗೆ ಹೋಗುತ್ತಾರೆ. ಪಕ್ಕದ ಅರಸೀಕೆರೆ, ತಿಪಟೂರುಗಳಲ್ಲಿನ ಗಾರ್ಮೆಂಟ್ಸ್‌ ಫ್ಯಾಕ್ಟರಿ, ಸೆಕ್ಯುರಿಟಿ ಗಾರ್ಡ್‌ ಏಜೆನ್ಸಿಗಳಿಗೂ ಕೆಲವರು ಪ್ರತಿದಿನ ಕೆಲಸಕ್ಕೆ ಹೋಗಿಬರುತ್ತಾರೆ. ನಮ್ಮ ಕ್ಷೇತ್ರಕ್ಕೆ ಖಾಸಗಿ ಕೈಗಾರಿಕೆಗಳನ್ನು ತರಲು ಪ್ರಯತ್ನ ಮಾಡುತ್ತೇನೆ. ಪ್ರಮುಖವಾಗಿ ಗಾರ್ಮೆಂಟ್ಸ್‌ ಉದ್ಯಮಕ್ಕೆ ಅವಕಾಶ ನೀಡುವ ಇರಾದೆ ಇದೆ. ಸಾಧಕ ಬಾಧಕಗಳ ಬಗ್ಗೆ ಉದ್ಯಮಿಗಳು, ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಕಾರ್ಯನ್ಮೋಖವಾಗುತ್ತೇನೆ.

ಅಮೃತ ಮಹಲ್‌ ಕಾವಲ್‌ ಸುಧಾರಣೆಗೆ ಏನು ಮಾಡುತ್ತೀರಿ?
ಕ್ಷೇತ್ರದಲ್ಲಿನ ಅಮೃತ ಮಹಲ್‌ ಕಾವಲ್‌ನಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಇದೆ. ರಾಸುಗಳ ಸಮರ್ಪಕ ನಿರ್ವಹಣೆ ನಿಟ್ಟಿನಲ್ಲಿ ಗಮನಹರಿಸುತ್ತೇನೆ. ಅಲ್ಲದೇ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಸುಧಾರಣೆಗೆ ಆದ್ಯತೆ ನೀಡುತ್ತೇನೆ.

 ಆಡಳಿತ ಯಂತ್ರ ಚುರುಕು, ಜನಸ್ಪಂದನೆ ಕಾರ್ಯಕ್ರಮಗಳು...
ತಾಲ್ಲೂಕಿನ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಕ್ರಮ ವಹಿಸು ತ್ತೇನೆ. ಬಗರ್‌ಹುಕುಂ ಸಾಗುವಳಿ ಚೀಟಿ ವಿತರಣೆಯಲ್ಲಿ ಅಕ್ರಮಗಳು ನಡೆದಿರುವುದು ಗಮನಕ್ಕೆ ಬಂದಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ. ಜನರೊಟ್ಟಿಗೇ ಸದಾ ಇರುತ್ತೇನೆ. ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.

 ರಾಷ್ಟ್ರೀಯ ಹೆದ್ದಾರಿ–206ರಲ್ಲಿ ಕಡೂರು ಹಾಸುಪಾಸಿನಲ್ಲಿ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಕ್ರಮಗಳು...
ಈ ಹೆದ್ದಾರಿಯಲ್ಲಿ ದಿನೇದಿನೇ ವಾಹನಗಳ ಸಂಚಾರ ಹೆಚ್ಚುತ್ತಿದೆ. ಹೆದ್ದಾರಿಯನ್ನು ಚತುಷ್ಪಥವಾಗಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಭೂಸ್ವಾಧೀನ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರದವರು ಜಮೀನುಗಳ ಮಾಲೀಕರನ್ನು ಕರೆದು ಈಚೆಗೆ ಮಾತುಕತೆ ನಡೆಸಿದ್ದಾರೆ. ಬೈಪಾಸ್‌ ರಸ್ತೆಯೂ ನಿರ್ಮಾಣವಾಗಲಿದೆ. ಚತುಷ್ಪಥ ನಿರ್ಮಾಣವಾದರೆ ಸಮಸ್ಯೆ ಕ್ರಮೇಣವಾಗಿ ಪರಿಹಾರವಾಗುತ್ತದೆ.

ಮೂಲಸೌಕರ್ಯ ಅಭಿವೃದ್ಧಿ ನಿಟ್ಟಿನ ರೂಪುರೇಷೆಗಳೇನು?

ಕುಡಿಯುವ ನೀರಿನ ಬವಣೆ ನಿವಾರಣೆಗೆ ಆದ್ಯ ಗಮನ ಹರಿಸುತ್ತೇನೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ವಿವಿಧ ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸುತ್ತೇನೆ. ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳು ಫಲಾನಭವಿಗಳು ತಲುಪಿಸುವ ನಿಟ್ಟಿನಲ್ಲಿ ನಿಗಾ ವಹಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನ ತಂದು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ, ಕ್ಷೇತ್ರದ ಸಮಗ್ರ ಪ್ರಗತಿಗೆ ಶ್ರಮಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT