ಕ್ರೈಸ್ಟ್ಚರ್ಚ್:ಭಾರತ ‘ಎ’ ತಂಡದ ಎಡಗೈ ವೇಗದ ಬೌಲರ್ ಖಲೀಲ್ ಅಹಮದ್ ಅವರು ನ್ಯೂಜಿಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದಾರೆ.
‘ಇದೇ ತಿಂಗಳ 22ರಂದು ಲಿಂಕನ್ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ‘ಎ’ ಎದುರಿನ ಮೊದಲ ಏಕದಿನ ಪಂದ್ಯದ ವೇಳೆ ಖಲೀಲ್ ಅವರ ಎಡಗೈ ಮಣಿಕಟ್ಟಿನ ಮೂಳೆಗೆ ಗಾಯವಾಗಿತ್ತು. ಇದರಿಂದ ಅವರು ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ನ್ಯೂಜಿಲೆಂಡ್ ‘ಎ’ ಎದುರಿನ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಹೋಗಿ ಪುನಶ್ಚೇತನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಬಿಸಿಸಿಐ, ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳಿಂದ ಗೆದ್ದಿದ್ದ ಭಾರತ ‘ಎ’ ತಂಡ, ಎರಡನೇ ಪಂದ್ಯದಲ್ಲಿ 29ರನ್ಗಳಿಂದ ಸೋತಿತ್ತು. ಮೊದಲ ಪಂದ್ಯದಲ್ಲಿ ಎಂಟು ಓವರ್ ಬೌಲ್ ಮಾಡಿದ್ದ ಖಲೀಲ್, ಎರಡು ವಿಕೆಟ್ ಉರುಳಿಸಿದ್ದರು.
ಉಭಯ ತಂಡಗಳ ನಡುವಣ ಮೂರನೇ ಏಕದಿನ ಹೋರಾಟ ಭಾನುವಾರ ನಡೆಯಲಿದೆ. ಈ ಹಣಾಹಣಿಯ ಬಳಿಕ ಭಾರತ ‘ಎ’ ತಂಡ ಆತಿಥೇಯರ ವಿರುದ್ಧ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.