ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಮಿತಿಯ ಕಚೇರಿಯ ಉದ್ಯೋಗಿಯೊಬ್ಬರಿಗೆ ಕೋವಿಡ್–19 ಸೋಂಕು ಖಚಿತವಾಗಿದ್ದು, ಶುಕ್ರವಾರದಿಂದ ಕ್ರಿಕೆಟ್ ಶಿಬಿರವನ್ನು ಸ್ಥಗಿತಗೊಳಿಸಲಾಗಿದೆ.
ಲಾಕ್ಡೌನ್ ಕಾರಣದಿಂದ ಸುಮಾರು ಮೂರು ತಿಂಗಳು ಕೆಎಸ್ಸಿಎ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಹೋದ ಸೋಮವಾರದಿಂದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಮತ್ತು 23 ವರ್ಷದೊಳಗಿನ ತಂಡಗಳ ಆಟಗಾರರಿಗೆ ಫಿಟ್ನೆಸ್ ಟೆಸ್ಟ್, ಯೋಗ ಶಿಬಿರ ಇಡಲಾಗಿತ್ತು.
’ಈಗ ಪಾಸಿಟಿವ್ ಆಗಿರುವ ಉದ್ಯೋಗಿಯು ಹೋದ ಎರಡು ವಾರಗಳಿಂದ ಕಚೇರಿಗೆ ಬಂದಿಲ್ಲ. ಆದರೂ ಕ್ರೀಡಾಂಗಣ ಮತ್ತು ಕಚೇರಿಯನ್ನು ಸೋಂಕುರಹಿತಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುವುದು. ಅಲ್ಲಿಯವರೆಗೂ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತೇವೆ‘ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಈ ಮೊದಲು ಜುಲೈ ಮೊದಲ ವಾರದಲ್ಲಿ ಲೀಗ್ ಟೂರ್ನಿಗಳನ್ನು ನಡೆಸಲು ಕೆಎಸ್ಸಿಎ ಉದ್ದೇಶಿಸಿತ್ತು. ಆದರೆ ನಗರದಲ್ಲಿ ಕೊರೊನಾ ಸೋಂಕು ಪ್ರಸರಣವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಿತ್ತು.