ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲಿಗರ ಸಂಭ್ರಮ, ಕೆಲವರ ನಡೆ ನಿಗೂಢ

ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಸ್ಥಾನ ಪಡೆದ ಹಾಲಾಡಿ
Last Updated 10 ಏಪ್ರಿಲ್ 2018, 12:11 IST
ಅಕ್ಷರ ಗಾತ್ರ

ಕುಂದಾಪುರ: ದೆಹಲಿಯಲ್ಲಿ ಭಾನುವಾರ ರಾತ್ರಿ ಪ್ರಕಟಗೊಂಡ ಬಿಜೆಪಿಯ ಅಧಿಕೃತ 72 ಮಂದಿಯ ಮೊದಲ ಪಟ್ಟಿಯಲ್ಲಿಯೇ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹೆಸರು ಪ್ರಕಟವಾಗಿದ್ದು, ಕ್ಷೇತ್ರದಾದ್ಯಂತ ಹಾಲಾಡಿ ಬೆಂಬಲಿಗರು ಸಂಭ್ರಮ ಆಚರಿಸಿದರು.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಕಾರ್ಯದರ್ಶಿ ಜಗತ್‌ ಪ್ರಕಾಶ್‌ ನಡ್ವಾ ಸಹಿ ಮಾಡಿರುವ ಪಕ್ಷದ ಪ್ರಥಮ ಅಧಿಕೃತ ಯಾದಿ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಹಾಲಾಡಿ ಬೆಂಗಲಿಗರು ತಡ ರಾತ್ರಿಯಲ್ಲಿಯೂ ತಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಫೋನಾಯಿಸಿ ಸಂಭ್ರಮ ಹಂಚಿಕೊಂಡರು. ಮಾಧ್ಯಮಗಳಿಗೆ ಬಿಡುಗಡೆಯಾಗಿದ್ದ ಪಟ್ಟಿಯ ಪ್ರತಿಯನ್ನು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿ ತಮ್ಮ ಅಮಿತೋತ್ಸಾವವನ್ನು ಪ್ರಕಟಪಡಿಸಿದರು.

ಹಿಂದಿನ ನಾಲ್ಕು ಅವಧಿಯಲ್ಲಿ ಮೂರು ಬಾರಿ ಬಿಜೆಪಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ಕಾರಣಗಳಿಗಾಗಿ ಪಕ್ಷಕ್ಕೆ ಹಾಗೂ ಶಾಸಕತ್ವಕ್ಕೆ ರಾಜೀನಾಮೆ ನೀಡಿ 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಅಭೂತಪೂರ್ವ ಜಯ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯಾಡಳಿತಗಳಲ್ಲಿ ಬಿಜೆಪಿ ಪ್ರತಿನಿಧಿಸುತ್ತಿದ್ದ ಹೆಚ್ಚಿನ ಜನಪ್ರತಿನಿಧಿಗಳು ಹಾಲಾಡಿಯವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಪಕ್ಷೇತರ ಶಾಸಕರಾಗಿ ಆಯ್ಕೆಯಾದ ಬಳಿಕ ಯಾವುದೇ ರಾಜಕೀಯ ಪಕ್ಷದ ಜತೆ ಗುರುತಿಸಿಕೊಳ್ಳದೆ ಇದ್ದರೂ, ನಂತರ ನಡೆದ ಹೆಚ್ಚಿನ ಚುನಾವಣೆಗಳಲ್ಲಿ ಬಿಜೆಪಿಯಲ್ಲಿ ಇದ್ದ ತನ್ನ ಬೆಂಬಲಿಗರ ಪರವಾಗಿ ಹಾಲಾಡಿ ಗುರುತಿಸಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಹಾಲಾಡಿ ಅವರನ್ನು ಹೊರತುಪಡಿಸಿ ಅವರ ನಿಕಟವರ್ತಿಯಾಗಿದ್ದ ಕಿರಣ್‌ಕುಮಾರ ಕೊಡ್ಗಿ ಸೇರಿ ಅನೇಕರು ಬಿಜೆಪಿ ಮರುಸೇರ್ಪಡೆಯಾಗುವ ಮೂಲಕ ಹಾಲಾಡಿ ಪಕ್ಷಕ್ಕೆ ಹತ್ತಿರವಾಗುವ ಸೂಚನೆ ರವಾನಿಸಿದ್ದರು.

ವಿಧಾನಸಭಾ ಅವಧಿ ಮುಕ್ತಾಯಕ್ಕೆ ಸಮೀಪವಿದ್ದಾಗ ಅನೇಕ ರಾಜಕೀಯ ಪಕ್ಷಗಳು ಪಕ್ಷೇತರರಾಗಿದ್ದ ಹಾಲಾಡಿಯವರನ್ನು ತಮ್ಮ ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದರೂ, ಹಾಲಾಡಿ ತಮ್ಮ ನಿರ್ಧಾರದ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಬಿಜೆಪಿ ಮುಖಂಡರು ಹಾಗೂ ಅಭಿಮಾನಿಗಳ ಒತ್ತಾಯ ಹೆಚ್ಚಾದಾಗ ಬಿಜೆಪಿಯ ಪ್ರಮುಖ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಕುಂದಾಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಪಾಲ್ಗೊಳ್ಳುವ ಮೂಲಕ ಬಿಜೆಪಿ ಸೇರ್ಪಡೆಯ ವಿಚಾರವನ್ನು ಬಹಿರಂಗಗೊಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲಿ ಬಿಜೆಪಿ ಸೇರಿದ್ದರು.

ಟಿಕೆಟ್‌ ನೀಡಿಕೆಗೆ ವಿರೋಧ: ಪಕ್ಷ ತೊರೆದು ಪಕ್ಷೇತರರಾಗಿ ಹಾಲಾಡಿ ನಿಲ್ಲುವ ತೀರ್ಮಾನ ಮಾಡಿದ್ದಾಗ ಅವರನ್ನು ಬೆಂಬಲಿಸದೆ ಪಕ್ಷದಲ್ಲಿ ಸಕ್ರಿಯರಾಗಿ ಉಳಿದುಕೊಂಡಿದ್ದವರು ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ಬಿ.ಕಿಶೋರಕುಮಾರ್‌. ಅವರ ಮತ್ತು ಅವರ ಬೆಂಬಲಿಗರ ನಡೆಯನ್ನು ಕ್ಷೇತ್ರದ ಮತದಾರರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಪ್ರಾರಂಭದಲ್ಲಿ ಕೇವಲ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದ್ದ ವಿರೋಧ ನಂತರದ ದಿನಗಳಲ್ಲಿ ಬಹಿರಂಗ ಹೇಳಿಕೆ, ಗುಂಪುಗಾರಿಕೆ, ಪ್ರತಿಭಟನೆ, ಪೊಲೀಸ್‌ ಠಾಣೆಯಲ್ಲಿ ದೂರು ನೀಡುವವರೆಗೆ ಮುಂದುವರೆದಿತ್ತು. ಪುರಸಭೆಯ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಪಕ್ಷದ ಮುಖಂಡರಾದ ಬೆಳ್ವೆ ವಸಂತ ಶೆಟ್ಟಿ, ಸತೀಶ್‌ ಶೆಟ್ಟಿ ಮೇರ್ಡಿ, ಶ್ರೀನಿವಾಸ ಕುಂದರ್‌ ಮುಂತಾದವರು ವಿರೋಧ ಅಭಿಯಾನಕ್ಕೆ ಸಾಥ್‌ ನೀಡಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಪರ ಹಾಗೂ ವಿರೋಧದ ಗುಂಪುಗಳಲ್ಲಿ ಗುರುತಿಸಿಕೊಂಡವರ ಸ್ಥಾನ ಪಲ್ಲಟಗಳು ನಡೆಯಿತು. ಪಕ್ಷದ ಪ್ರಮುಖ ಸಭೆಗಳಲ್ಲದೇ ಬೆಂಗಳೂರಿನಲ್ಲಿ ನಡೆದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಮಾಲೋಚನಾ ಸಭೆಯಲ್ಲಿಯೂ ಬಹಿರಂಗ ಆಕ್ಷೇಪಗಳು ಕೇಳಿ ಬಂದಿತ್ತು. ಈ ಎಲ್ಲ ಬೆಳವಣಿಗೆಯ ಜತೆ ಹಿಂದೆ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ಎ.ಜಿ.ಕೊಡ್ಗಿ ಮಾಧ್ಯಮಗಳ ಮೂಲಕ ತಮ್ಮ ಅಸಮಧಾನವನ್ನು ತೋಡಿಕೊಂಡ ಘಟನೆಯೂ ನಡೆದಿತ್ತು.

ಭಾನುವಾರ ರಾತ್ರಿ ಪ್ರಕಟವಾದ ಪಟ್ಟಿಯಲ್ಲಿ ಹಾಲಾಡಿ ಹೆಸರು ಖಚಿತವಾಗುತ್ತಿದ್ದಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯ ಕುರಿತು ಕೇಳಿ ಬರುತ್ತಿದ್ದ ಎಲ್ಲ ಊಹಾಪೋಹಗಳಿಗೆ ಶಾಶ್ವತವಾದ ಬೀಗ ಮುದ್ರೆ ಬಿದ್ದಿದೆ. ಹಾಲಾಡಿ ಬೆಂಬಲಿಗರಲ್ಲಿ ಯುದ್ದ ಗೆದ್ದ ಸಂಭ್ರಮ ನೆಲೆಸಿದೆ.

**

ವರಿಷ್ಠರ ತೀರ್ಮಾನ ಸಂತೋಷ ತಂದಿದೆ. ಮತ್ತೊಮ್ಮೆ ಕ್ಷೇತ್ರದ ಜನರ ಸೇವೆ ಮಾಡಲು ಪಕ್ಷ ಅವಕಾಶವನ್ನು ಮಾಡಿಕೊಟ್ಟಿದೆ – ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಅಭ್ಯರ್ಥಿ.

**

ನಮ್ಮ ಮುಂದಿನ ನಡೆ ಏನು ಎನ್ನುವುದನ್ನ ಹಿತೈಷಿಗಳು ಹಾಗೂ ಸಮಾನ ಮನಸ್ಕರೊಡನೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ – ಬಿ.ಕಿಶೋರಕುಮಾರ,ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ

**

ರಾಜೇಶ್‌ ಕೆ.ಸಿ ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT