ದುಬೈ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹೊಸದಾಗಿ ಆರಂಭಿಸಿರುವ ಮಾಸಿಕ ಪ್ರಶಸ್ತಿಗಾಗಿ ಭಾರತ ಕ್ರಿಕೆಟ್ ತಂಡದ ಆಫ್ಸ್ಪಿನ್ನರ್ ಆರ್. ಅಶ್ವಿನ್ ಮತ್ತು ವಿಕೆಟ್ಕೀಪರ್ ರಿಷಭ್ ಪಂತ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಈ ಪ್ರಶಸ್ತಿಗೆ ಭಾರತದ ಮೊಹಮ್ಮದ್ ಸಿರಾಜ್ ಮತ್ತು ತಂಗರಸು ನಟರಾಜನ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಈಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತವು ಐತಿಹಾಸಿಕ ಜಯ ಸಾಧಿಸಿತ್ತು.
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಅಫ್ಗಾನಿಸ್ತಾನದ ರೆಹಮಾನುಲ್ಲಾ ಗುರ್ಬಾಜ್, ದಕ್ಷಿಣ ಆಫ್ರಿಕಾದ ಮರೈನ್ ಕಾಪ್ ಮತ್ತು ನಾದಿನ್ ಡಿ ಕ್ಲರ್ಕ್ ಮತ್ತು ಪಾಕಿಸ್ತಾನದ ನಿದಾ ದಾರ್ ಅವರು ಕೂಡ ಈ ಪ್ರಶಸ್ತಿ ರೇಸ್ನಲ್ಲಿದ್ದಾರೆ.
ಪ್ರತಿ ತಿಂಗಳು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ನಾಮನಿರ್ದೇಶನ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡುತ್ತದೆ. ಅಭಿಮಾನಿಗಳು ಆನ್ಲೈನ್ನಲ್ಲಿ ತಮ್ಮ ನೆಚ್ಚಿನ ಆಟಗಾರನ ಪರವಾಗಿ ಮತ ಚಲಾಯಿಸಬೇಕು. ಹೆಚ್ಚು ಮತ ಪಡೆದವರು ಪ್ರಶಸ್ತಿ ಗೌರವಕ್ಕೆ ಪಾತ್ರರಾಗುತ್ತಾರೆ.
ಪ್ರಶಸ್ತಿ ವಿಜೇತರನ್ನು ನಿರ್ಧರಿಸಲು ಪ್ರತ್ಯೇಕ ವೋಟಿಂಗ್ ಅಕಾಡೆಮಿಯನ್ನು ರಚಿಸಲಾಗಿದೆ. ಅದರಲ್ಲಿ ಮಾಜಿ ಕ್ರಿಕೆಟಿಗರು, ಪ್ರಸಾರಕ ಸಂಸ್ಥೆಯ ಪ್ರತಿನಿಧಿಗಳು ಮತ್ತು ಪತ್ರಕರ್ತರು ಇರುತ್ತಾರೆ.
’ಕ್ರಿಕೆಟ್ ಅಭಿಮಾನಿಗಳೊಂದಿಗೆ ನಿಕಟ ಬಾಂಧವ್ಯ ವೃದ್ಧಿಸಿಕೊಳ್ಳಲು ಮಾಸಿಕ ಪ್ರಶಸ್ತಿ ಯೋಜನೆಯು ಬಹಳ ನೆರವಾಗಲಿದೆ. ಪ್ರತಿ ತಿಂಗಳೂ ಉತ್ತಮವಾಗಿ ಆಡುವ ಆಟಗಾರರಿಗೆ ಮನ್ನಣೆ ದೊರೆಯುತ್ತದೆ. ಇದರಿಂದ ಆಟಗಾರರಿಗೂ ಪ್ರೋತ್ಸಾಹ ಮತ್ತು ಅಭಿಮಾನಿಗಳಿಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತದೆ‘ ಎಂದು ಐಸಿಸಿ ಮಹಾಪ್ರಬಂಧಕ ಜೆಫ್ ಅಲಾರ್ಡಿಚ್ ಹೇಳಿದ್ದಾರೆ.
ಪ್ರತಿ ತಿಂಗಳ ಎರಡನೇ ಸೋಮವಾರದಂದು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಪುರುಷ ಮತ್ತು ಮಹಿಳಾ ವಿಭಾಗಗಳಿಗೆ ಪ್ರತ್ಯೇಕ ಸ್ಪರ್ಧೆ ಇದೆ.