ನವದೆಹಲಿ:2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಯ್ಕೆ ವಿಚಾರದಲ್ಲಿ ಆಗಿನ ನಾಯಕವಿರಾಟ್ ಕೊಹ್ಲಿ ನೀಡಿದ್ದ ಸಲಹೆಯನ್ನು ಆಯ್ಕೆ ಸಮಿತಿ ಪರಿಗಣಿಸಿರಲಿಲ್ಲ ಎಂದುಮಾಜಿ ಕೋಚ್ ರವಿ ಶಾಸ್ತ್ರಿ ದೂರಿದ್ದಾರೆ.
ತಂಡದ ನಾಲ್ಕನೇ ಕ್ರಮಾಂಕದಲ್ಲಿ ಅಂಬಟಿ ರಾಯುಡು ಕಣಕ್ಕಿಳಿಯಬೇಕು ಎಂದು ಟೂರ್ನಿಗೆ ಇನ್ನೂ ಕೆಲವು ತಿಂಗಳು ಇದ್ದಾಗಲೇ ಕೊಹ್ಲಿ ಹೇಳಿದ್ದರು. ಆದಾಗ್ಯೂ, ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ರಾಯುಡು ಅವರನ್ನು ಆಯ್ಕೆ ಮಾಡಿರಲಿಲ್ಲ ಎಂದು ಅವರು ದೂರಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆದ 2019ರ ವಿಶ್ವಕಪ್ ಟೂರ್ನಿಯಸೆಮಿಫೈನಲ್ನಲ್ಲಿ ಭಾರತ ತಂಡನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು.
ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶಾಸ್ತ್ರಿ,ತಂಡದಲ್ಲಿ ಮೂವರು ವಿಕೆಟ್ ಕೀಪರ್ಗಳಿಗೆ ಸ್ಥಾನ ನೀಡುವ ಬದಲು, ಅಂಬಟಿ ರಾಯುಡು ಅಥವಾ ಶ್ರೇಯಸ್ ಅಯ್ಯರ್ಗೆ ಸ್ಥಾನ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
'ಆ(ತಂಡದ ಆಯ್ಕೆ) ಬಗ್ಗೆ ಹೇಳಲು ಏನೂ ಇಲ್ಲ. ಆದರೆ, ವಿಶ್ವಕಪ್ಗೆ ಮೂವರು ವಿಕೆಟ್ಕೀಪರ್ಗಳನ್ನು ಆಯ್ಕೆ ಮಾಡಿದ್ದು, ನನಗೆ ಒಪ್ಪಿಗೆ ಇರಲಿಲ್ಲ. ಅಂಬಟಿ ಅಥವಾ ಶ್ರೇಯಸ್ ತಂಡದಲ್ಲಿರಬೇಕಿತ್ತು. ಎಂಎಸ್ ಧೋನಿ, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಮೂವರನ್ನೂ ತಂಡದಲ್ಲಿ ಇರಿಸಿಕೊಳ್ಳುವುದರಲ್ಲಿ ಯಾವ ತರ್ಕವಿದೆ?' ಎಂದು ಪ್ರಶ್ನಿಸಿದ್ದಾರೆ.
'ಆದಾಗ್ಯೂ, ಸಲಹೆ ಕೇಳಿದಾಗ ಅಥವಾ ಸಾಮಾನ್ಯ ಚರ್ಚೆ ಸಂದರ್ಭಗಳಲ್ಲಿ ಹೊರತುಪಡಿಸಿ, ಆಯ್ಕೆ ವಿಚಾರದಲ್ಲಿ ನಾನು ಯಾವತ್ತೂ ಮಧ್ಯಪ್ರವೇಶಿಸಲಿಲ್ಲ' ಎಂದೂ ಒತ್ತಿಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ,ಇತ್ತೀಚೆಗೆ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಗುಂಪು ಹಂತದಲ್ಲಿಯೇ ನಿರ್ಗಮಿಸಿತ್ತು. ಅದಾದ ಬಳಿಕ ಕೊಹ್ಲಿ, ಚುಟುಕು ಕ್ರಿಕೆಟ್ನಲ್ಲಿ ನಾಯಕತ್ವ ತೊರೆದಿದ್ದಾರೆ.
ನಿಗದಿತ ಓವರ್ಗಳ (ಟಿ20, ಏಕದಿನ) ಕ್ರಿಕೆಟ್ನಲ್ಲಿ ಇಬ್ಬರು ನಾಯಕರನ್ನು ಹೊಂದುವುದು ಬೇಡ ಎಂಬ ಕಾರಣದಿಂದ ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಳಿಸಲಾಗಿದೆ. ಈ ಎರಡೂ ಮಾದರಿಗೆ ರೋಹಿತ್ ಶರ್ಮಾ ನಾಯಕರಾಗಿದ್ದು, ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.