ನವದೆಹಲಿ: ‘ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿ ನಡೆಯುವ ವಿಶ್ವಾಸವಿದೆ. ಲೀಗ್ನಲ್ಲಿ ಆಡಲು ಎಲ್ಲಾ ಆಟಗಾರರು ಕಾತರರಾಗಿದ್ದಾರೆ’ ಎಂದು ಇಂಗ್ಲೆಂಡ್ನ ಹಿರಿಯ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಶನಿವಾರ ಹೇಳಿದ್ದಾರೆ.
‘ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನಿರ್ಬಂಧಿಸಿ ಪ್ರಮುಖ ಮೂರು ಮೈದಾನಗಳಲ್ಲಿ ಮೂರು ಅಥವಾ ನಾಲ್ಕು ವಾರಗಳ ಕಾಲ ಲೀಗ್ ನಡೆಸಬಹುದು. ಇದರಿಂದ ಫ್ರಾಂಚೈಸ್ಗಳಿಗೆ ಆಗುವ ನಷ್ಟವನ್ನು ತಪ್ಪಿಸಬಹುದು. ಒಂದಷ್ಟು ಮಂದಿಗೆ ಕೆಲಸವೂ ಸಿಕ್ಕಂತಾಗುತ್ತದೆ’ ಎಂದಿದ್ದಾರೆ.
ಭಾರತದ ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರೂ ಪೀಟರ್ಸನ್ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 13ನೇ ಆವೃತ್ತಿಗೆ ಮಾರ್ಚ್ 29ರಂದು ಚಾಲನೆ ಸಿಗಬೇಕಿತ್ತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಕೊರೊನಾ ವೈರಾಣು ಹರಡುವ ಭೀತಿಯಿಂದಾಗಿ ಲೀಗ್ ಅನ್ನು ಏಪ್ರಿಲ್ 15ಕ್ಕೆ ಮುಂದೂಡಿತ್ತು.