ನವದೆಹಲಿ : ಗಾಯದಿಂದ ಗುಣಮುಖವಾಗಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ, ಅಭ್ಯಾಸ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೆಟ್ಸ್ನಲ್ಲಿ ಶುಕ್ರವಾರ ಪೃಥ್ವಿ ಬೆವರು ಹರಿಸಿದರು.
ಮುಂಬೈಯ 19 ವರ್ಷದ ಆಟಗಾರ, ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಸಿಡ್ನಿಯಲ್ಲಿ ನಡೆದಿದ್ದ ಅಭ್ಯಾಸ ಪಂದ್ಯದ ವೇಳೆ ಪಾದದ ನೋವಿನಿಂದ ಬಳಲಿದ್ದರು.
‘ಗಾಯದ ಕಾರಣ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಆಡಲು ಆಗಲಿಲ್ಲ. ಹೀಗಾಗಿ ತುಂಬಾ ನಿರಾಸೆಯಾಗಿತ್ತು. ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದು ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದೇನೆ’ ಎಂದು ಪೃಥ್ವಿ ಹೇಳಿದ್ದಾರೆ.