ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಾಗೆ ಮಾಹಿತಿ ನೀಡದ ರಾಹುಲ್, ಪೂಜಾರ, ಸ್ಮೃತಿ‌ಗೆ ನೋಟಿಸ್

Last Updated 14 ಜೂನ್ 2020, 2:04 IST
ಅಕ್ಷರ ಗಾತ್ರ

ನವದೆಹಲಿ: ತಾವು ಎಲ್ಲಿದ್ದೇವೆ ಎಂಬುದರ ಕುರಿತು ಸಮರ್ಪಕ ಮಾಹಿತಿ ಒದಗಿಸದಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜ ಒಳಗೊಂಡಂತೆ ಕೇಂದ್ರೀಯ ಗುತ್ತಿಗೆ ಪದ್ಧತಿಯಲ್ಲಿರುವ ಐವರು ಕ್ರಿಕೆಟಿಗರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಶನಿವಾರ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ಪಡೆದವರಲ್ಲಿ ಮಹಿಳಾ ಕ್ರಿಕೆಟರ್‌ಗಳಾದ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಅವರೂ ಇದ್ದಾರೆ. ಇವರೆಲ್ಲರೂ ನಾಡಾ ಅಡಿಯಲ್ಲಿ ಬರುವ ಒಟ್ಟು 110 ಮಂದಿ ಕ್ರಿಕೆಟರ್‌ಗಳ ಪಟ್ಟಿಯಲ್ಲಿದ್ದಾರೆ.ಆದರೆ ನೋಟಿಸ್‌ಗೆ ಸ್ಪಂದಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರನ್ನು ಸಮರ್ಥಿಸಿಕೊಂಡಿದ್ದು ಪಾಸ್‌ವರ್ಡ್‌ ಸಮಸ್ಯೆಯಿಂದಾಗಿ ವಿವರ ಸಲ್ಲಿಸಲು ಆಗಲಿಲ್ಲ ಎಂದು ತಿಳಿಸಿದೆ.

ನೋಟಿಸ್ ಜಾರಿ ಮಾಡಿದ್ದರ ಕುರಿತು ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ನಾಡಾ ಮಹಾನಿರ್ದೇಶಕ ನವೀನ್ ಅಗರವಾಲ್‌‘ಉದ್ದೀಪನ ಮದ್ದು ತಡೆಗೆ ಸಂಬಂಧಿಸಿದ ಆಡಳಿತ ಮತ್ತು ವ್ಯವಸ್ಥಾಪನಾ ಸೌಲಭ್ಯ ಸಾಫ್ಟ್‌ವೇರ್‌ನಲ್ಲಿ (ಆ್ಯಡಮ್ಸ್‌) ಕ್ರೀಡಾಪಟುಗಳ ಮಾಹಿತಿ ಎರಡು ಬಗೆಯಲ್ಲಿ ತುಂಬಬಹುದಾಗಿದೆ. ಸ್ವತಃ ಕ್ರೀಡಾಪಟುಗಳು ಅಥವಾ ಅವರು ಪ್ರತಿನಿಧಿಸುವ ಸಂಸ್ಥೆ ಮಾಹಿತಿ ಅಪ್‌ಲೋಡ್ ಮಾಡಬಹುದು. ಆದರೆ ಈಗ ಕೆಲವು ವಿಭಾಗಗಳ ಕ್ರೀಡಾಪಟುಗಳಿಗೆ ಈ ಕುರಿತು ಸರಿಯಾದ ಮಾಹಿತಿ ಇಲ್ಲ. ಇಂಟರ್‌ನೆಟ್ ಸಮಸ್ಯೆಯಿಂದಲೂ ಕೆಲವರಿಗೆ ತುಂಬಲು ಆಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಸಂಬಂಧಪಟ್ಟ ಸಂಸ್ಥೆಯವರ ನೆರವು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಕ್ರಿಕೆಟ್ ಆಟಗಾರರೆಲ್ಲರೂ ತಂತ್ರಜ್ಞಾನ ಬಳಕೆಯಲ್ಲಿ ಪಳಗಿದವರು. ಆದರೂ ಕೆಲವರಿಗೆ ವಿವರಗಳನ್ನು ತುಂಬಲು ಆಗುತ್ತಿಲ್ಲ. ಕೆಲವರಿಗೆ ಸಮಯ ಸಿಗುತ್ತಿಲ್ಲ. ಅದೇನೇ ಇರಲಿ, ಅವರು ಪ್ರತಿನಿಧಿಸುವ ಸಂಸ್ಥೆಯು ಇದಕ್ಕೆ ಜವಾಬ್ದಾರಿ. ಆಟಗಾರರ ಮಾಹಿತಿ ಒದಗಿಸುವುದಾಗಿ ಬಿಸಿಸಿಐ ಈ ಹಿಂದೆ ಒಪ್ಪಿಕೊಂಡಿದೆ. ಆದ್ದರಿಂದ ಅವರು ಮಾಹಿತಿ ಅಪ್‌ಲೋಡ್ ಮಾಬೇಕಾಗಿತ್ತು’ ಎಂದು ಅವರು ವಿವರಿಸಿದರು.

‘ಮಾಹಿತಿ ಸಮರ್ಪಕವಾಗಿ ಅಪ್‌ಲೋಡ್ ಆಗದೇ ಇರುವುದಕ್ಕೆ ಬಿಸಿಸಿಐ ಕಾರಣ ನೀಡಿದೆ. ಸದ್ಯ ಅದನ್ನು ಪರಿಗಣಿಸಲಾಗಿದೆ. ಆದರೆ ಅಂತಿಮ ನಿರ್ಧಾರ ಇನ್ನಷ್ಟೇ ಕೈಗೊಳ್ಳಬೇಕಾಗಿದೆ. ಸಾಫ್ಟ್‌ವೇರ್‌ನ ಪಾಸ್‌ವರ್ಡ್‌ಗೆ ಸಂಬಂಧಿಸಿ ಸಮಸ್ಯೆಯಾಗಿದ್ದು ಈಗ ಸರಿಪಡಿಸಲಾಗಿದೆ ಎಂದು ಬಿಸಿಸಿಐ ವಿವರಿಸಿದೆ. ಆದರೆ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ’ ಎಂದು ನವೀನ್ ಹೇಳಿದರು.

ಗಂಭೀರ ತಪ್ಪು; ಅಮಾನತು ಶಿಕ್ಷೆ ಇದೆ

ಮಾಹಿತಿ ನೀಡಲು ಸತತ ಮೂರು ಬಾರಿ ವಿಫಲವಾದರೆ ಉದ್ದೀಪನ ಮದ್ದು ತಡೆ ಉಲ್ಲಂಘನೆ ನಿಯಮದಡಿ (ಎಡಿಆರ್‌ವಿ) ಮೊದಲ ತಪ್ಪು ಎಂದು ಪರಿಗಣಿಸಲಾಗುತ್ತದೆ. ತಪ್ಪೆಸಗಿರುವುದು ಸಾಬೀತಾದರೆ ವಿಚಾರಣೆಗಾಗಿ ಎರಡು ವರ್ಷ ಅಮಾನತು ಮಾಡಲಾಗುತ್ತದೆ.

ಈ ಕುರಿತು ಬಿಸಿಸಿಐನ ಹಿರಿಯ ಪದಾಧಿಕಾರಿಯೊಬ್ಬರು ಮಾತನಾಡಿ ‘ಲಾಕ್‌ಡೌನ್ ಅವಧಿಯಲ್ಲಿ ಸಾಮಾಜಿಕ ತಾಣ‌ಗಳಲ್ಲಿ ಸತತವಾಗಿ ಚಾಟ್ ಮಾಡುವವರಿಗೆ ಸಾಫ್ಟ್‌ವೇರ್‌ನಲ್ಲಿ ಮಾಹಿತಿ ತುಂಬಲು ಆಗಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಪಾಸ್‌ವರ್ಡ್ ಸಮಸ್ಯೆ ಇದ್ದರೆ ಈ ಐವರು ಆಟಗಾರರಿಗೆ ತಾವೇ ಮಾಹಿತಿ ತುಂಬಲು ಸೂಚಿಸಬಹುದಿತ್ತು. ಅವರು ವೈಯಕ್ತಿಕವಾಗಿ ಅದನ್ನು ಮಾಡುತ್ತಿದ್ದರು. ಸದ್ಯ ನಾಡಾ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ನನ್ನ ಅನಿಸಿಕೆ. ಒಂದು ವೇಳೆ ಅದು ನೀಡಿದ್ದು ಅಧಿಕೃತ ಎಚ್ಚರಿಕೆ ಆಗಿದ್ದರೆ ಈ ತಪ್ಪಿಗೆ ಯಾರು ಹೊಣೆ’ ಎಂದು ಈ ಪದಾಧಿಕಾರಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT