ಗುವಾಹಟಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಗುವಾಹಟಿಯಲ್ಲಿ ಆರಂಭಗೊಂಡಿರುವ ಕ್ರಿಕೆಟ್ ಅಕಾಡೆಮಿಯಲ್ಲಿ ಮೂರು ದಿನಗಳ ಶಿಬಿರದಲ್ಲಿ ಪಾಲ್ಗೊಂಡರು. ರಾಜ್ಯ ಕ್ರಿಕೆಟ್ ಸಂಸ್ಥೆಯ ಬರ್ಸಾಪರ ಕ್ರೀಡಾಂಗಣದಲ್ಲಿರುವ ಅಕಾಡೆಮಿಯಲ್ಲಿ ಕಳೆದ ಏಳರಿಂದ ಒಂಬತ್ತರ ವರೆಗೆ ಶಿಬಿರ ನಡೆದಿತ್ತು.
ತಂಡದ ಮುಖ್ಯ ಫಿಸಿಯೊ ಜಾನ್ ಗ್ಲಾಸ್ಟರ್ ಏಳು ಹಂತಗಳಲ್ಲಿ ತರಬೇತಿ ನೀಡಿದರು. ಅವರೊಂದಿಗೆ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಮತ್ತು ಹೊಸ ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ಕೋಚ್ ಎ.ಟಿ.ರಾಜಮಣಿ ಪ್ರಭು ಇದ್ದರು.
ಆಟಗಾರರ ಜೊತೆ ನಡೆಸಿದ ಸಂವಾದದ ಸಂದರ್ಭದಲ್ಲಿ ನ್ಯೂಟ್ರಿಷನ್, ಫಿಟ್ನೆಸ್ನಿಂದ ಹಿಡಿದು ಮಾನಸಿಕ ತರಬೇತಿ, ತೆಗೆದುಕೊಳ್ಳಬೇಕಾದ ಆಹಾರ, ಅಗತ್ಯವಿರುವ ಪ್ರೊಟೀನ್ಗಳು, ಏಕಾಗ್ರತೆ, ಭಾವುಕತೆಯ ನಿರ್ವಹಣೆ, ಸೋಲಿನ ಸಂದರ್ಭ ಮತ್ತು ಕೋಪ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಗ್ಲಾಸ್ಟರ್ ಮಾಹಿತಿ ನೀಡಿದರು.
ಶಿಬಿರದಲ್ಲಿದ್ದ 22 ಮಂದಿ ಯುವ ಆಟಗಾರರಿಗೆ ಸ್ಟುವರ್ಟ್ ಬಿನ್ನಿ ವಿಶೇಷ ಮಾಹಿತಿಗಳನ್ನು ಒಳಗೊಂಡ ತರಗತಿ ತೆಗೆದುಕೊಂಡರು.