ಬೆಂಗಳೂರು:41 ಬಾರಿಯ ಚಾಂಪಿಯನ್ ಮುಂಬೈ ತಂಡದ ವಿರುದ್ಧ ಈ ಬಾರಿಯರಣಜಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿರುವ ಮಧ್ಯಪ್ರದೇಶ ಇನಿಂಗ್ಸ್ ಮುನ್ನಡೆಯ ಹೊಸ್ತಿಲಲ್ಲಿ ಬಂದು ನಿಂತಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 22ರಂದು ಆರಂಭವಾದ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತ್ತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (78) ಗಳಿಸಿದ ಅರ್ಧಶತಕ ಹಾಗೂ ಸರ್ಫರಾಜ್ ಖಾನ್ (134) ಸಿಡಿಸಿದ ಅಮೋಘ ಶತಕದ ಬಲದಿಂತ 374ರನ್ ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಮಧ್ಯಪ್ರದೇಶ, ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ಗಳನ್ನು ಕಳೆದುಕೊಂಡು 368 ರನ್ ಗಳಿಸಿದೆ.
ಟೂರ್ನಿಯುದ್ದಕ್ಕೂ ಮಧ್ಯಪ್ರದೇಶ ಪಡೆಯ ಬ್ಯಾಟಿಂಗ್ ಬಲ ಎನಿಸಿರುವ ಯಶ್ ದುಬೆ (133) ಮತ್ತು ಶುಭಂ ಎಸ್. ಶರ್ಮಾ (116) ಶತಕ ಗಳಿಸುವ ಮೂಲಕ ಮಿಂಚಿದರು. ಈ ಇಬ್ಬರೂ ಎರಡನೇ ವಿಕೆಟ್ಗೆ 222 ರನ್ ಜೊತೆಯಾಟವಾಡಿ ತಂಡಕ್ಕೆ ನೆರವಾದರು.
ಸದ್ಯ ಈ ಇವರಿಬ್ಬರೂ ಔಟಾಗಿದ್ದು,ಅನುಭವಿ ಆಟಗಾರ ರಜತ್ ಪಾಟಿದಾರ್ (67) ಹಾಗೂ ನಾಯಕ ಆದಿತ್ಯ ಶ್ರೀವಸ್ತವ(11) ಕ್ರೀಸ್ನಲ್ಲಿದ್ದಾರೆ.ಇನಿಂಗ್ಸ್ ಮುನ್ನಡೆ ಗಳಿಸಲು ಕೇವಲ 6 ರನ್ ಬೇಕಿದೆ.