ಬೆಂಗಳೂರು: ಅನುಭವಿ ಆಟಗಾರ ಕರುಣ್ ನಾಯರ್ ಮತ್ತು ಹೊಸ ಪ್ರತಿಭೆ ನಿಕಿನ್ ಜೋಸ್ ಅವರಿಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕದ ಸಂಭವನೀಯರ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಮಂಗಳವಾರ 32 ಆಟಗಾರರ ಸಂಭವನೀಯ ತಂಡವನ್ನು ಬಿಡುಗಡೆ ಮಾಡಿದೆ.
ಈಚೆಗೆ ನಡೆದ ವಿಜಯ್ ಹಜಾರೆ ಏಕದಿನ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದ ಕರ್ನಾಟಕ ತಂಡದಿಂದ ಕರುಣ್ ನಾಯರ್ ಅವರನ್ನು ಕೈಬಿಡಲಾಗಿತ್ತು. ಏಕದಿನ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದ ನಿಕಿನ್ ಜೋಸ್ ಉತ್ತಮವಾಗಿ ಆಡಿದ್ದರು. ನಾಲ್ಕನೂರಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದರು.
ಮಧ್ಯಮವೇಗಿ ವಿದ್ಯಾಧರ ಪಾಟೀಲ, ಎಂ. ವೆಂಕಟೇಶ್ ಹಾಗೂ ವಿದ್ವತ್ ಕಾವೇರಪ್ಪ ಅವರಿಗೆ ಅವಕಾಶ ನೀಡಲಾಗಿದೆ. ಅನುಭವಿಗಳಾದ ರೋನಿತ್ ಮೋರೆ, ವಿ. ಕೌಶಿಕ್ ಮತ್ತು ಪ್ರಸಿದ್ಧ ಕೃಷ್ಣ ತಂಡದಲ್ಲಿದ್ದಾರೆ. ಭಾರತ ತಂಡದಲ್ಲಿ ಆಡುತ್ತಿರುವ ಕೆ.ಎಲ್. ರಾಹುಲ್ ಅವರ ಹೆಸರು ಕೂಡ ಪಟ್ಟಿಯಲ್ಲಿದೆ.
ಕರ್ನಾಟಕ ತಂಡವು ಸರ್ವಿಸಸ್ (ಡಿ.13–16. ಬೆಂಗಳೂರು), ಪುದುಚೇರಿ (ಡಿ. 20–23. ಬೆಂಗಳೂರು), ಗೋವಾ (ಡಿ 27–30; ಪೊರ್ವರಿಮ್), ಛತ್ತೀಸಗಢ (ಜ.3–6, ರಾಯಪುರ್), ರಾಜಸ್ಥಾನ (ಜ.10ರಿಂದ 13; ಬೆಂಗಳೂರು), ಕೇರಳ (ಜ. 17–20; ತಿರುವನಂತಪುರ) ಮತ್ತು ಜಾರ್ಖಂಡ್ (ಜ. 24–27; ರಾಂಚಿ) ತಂಡಗಳನ್ನು ಎದುರಿಸಲಿದೆ.
ಸಂಭವನೀಯ ತಂಡ: ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಡಿ ನಿಶ್ಚಲ್, ಅಭಿನವ್ ಮನೋಹರ್, ಕೆ.ವಿ. ಸಿದ್ಧಾರ್ಥ್, ಕೆ.ವಿ. ಅನೀಶ್, ಎಸ್.ಜೆ. ನಿಕಿನ್ ಜೋಸ್, ವಿಶಾಲ್, ಓನತ್, ಕೆ. ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಪಾರಸ್ ಗುರುಭಕ್ಷ್ ಆರ್ಯ, ಮೊಹಸಿನ್ ಖಾನ್, ರಿತೇಶ್ ಭಟ್ಕಳ್, ಶುಭಾಂಗ್ ಹೆಗ್ಡೆ, ಎ.ಸಿ. ರೋಹಿತ್ ಕುಮಾರ್, ಎಸ್.ಎ. ರಿಷಿ ಬೋಪಣ್ಣ, ಕೆ. ಶಶಿಕುಮಾರ್, ಶರತ್ ಶ್ರೀನಿವಾಸ್, ಬಿ.ಆರ್. ಶರತ್, ನಿಹಾಲ್ ಉಲ್ಲಾಳ (ಮೂವರು ವಿಕೆಟ್ಕೀಪರ್), ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ, ವಿ. ವೈಶಾಖ, ಎಂ. ವೆಂಕಟೇಶ್, ವಿದ್ಯಾಧರ ಪಾಟೀಲ, ವಿ. ಕೌಶಿಕ್, ವಿದ್ವತ್ ಕಾವೇರಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.