ಮುಂಬೈ: ಬರೋಬ್ಬರಿ ಮೂರು ತಿಂಗಳ ನಂತರ ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು ಹೊರಾಂಗಣ ಅಭ್ಯಾಸ ಆರಂಭಿಸಿದರು.
ದೀರ್ಘ ಅವಧಿಯ ನಂತರ ಗುರುವಾರ ತಮ್ಮ ಮನೆಯ ಸಮೀಪದ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.
ಅಭ್ಯಾಸ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿರುವ ಅವರು, ‘ಮೈದಾನಕ್ಕೆ ಬಂದಿರುವುದು ಸಂತಸವಾಗುತ್ತಿದೆ. ಬಹಳ ದಿನಗಳ ನಂತರ ಮನೆಯಿಂದ ಹೊರಗೆ ಬಂದಿರುವುದು ಒಂದು ಹೊಸ ಅನುಭವ’ ಎಂದು ಬರೆದಿದ್ದಾರೆ. ಆದರೆ ಅವರು ಯಾವ ಮೈದಾನದಲ್ಲಿದ್ದಾರೆಂದು ಅದರಲ್ಲಿ ತಿಳಿಸಿಲ್ಲ.
ಮಾರ್ಚ್ 25ರಂದು ದೇಶದಲ್ಲಿ ಲಾಕ್ಡೌನ್ ಆದ ನಂತರ ದೇಶದ ಇನ್ನುಳಿದ ಎಲ್ಲ ಕ್ರಿಕೆಟಿಗರಂತೆ ರೋಹಿತ್ ‘ಗೃಹಬಂಧನ’ದಲ್ಲಿದ್ದರು. ಹೋದ ತಿಂಗಳು ಬೌಲರ್ ಶಾರ್ದೂಲ್ ಠಾಕೂರ್ ಫಾಲ್ಗರ್ ಜಿಲ್ಲೆಯ ಬೊಯ್ಸಾರ್ನಲ್ಲಿ ಹೊರಾಂಗಣ ಅಭ್ಯಾಸ ಆರಂಭಿಸಿದ್ದರು. ಈಚೆಗೆ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಕೂಡ ರಾಜ್ಕೋಟ್ನಲ್ಲಿ ಅಭ್ಯಾಸ ಶುರು ಮಾಡಿದ್ದರು.
ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಸಂದರ್ಭದಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ನಂತರ ಶಸ್ತ್ರಚಿಕಿತ್ಸೆ ಮಾಡಿಕೊಂಡು ವಿಶ್ರಾಂತಿಯಲ್ಲಿದ್ದರು. ಅವರು ಮತ್ತೆ ಕಣಕ್ಕೆ ಮರಳುವ ಮುನ್ನ ಲಾಕ್ಡೌನ್ ಆರಂಭವಾಗಿತ್ತು.
ಕರ್ನಾಟಕ ರಣಜಿ ತಂಡದ ಆಟಗಾರರು ಸೋಮವಾರದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಿಟ್ನೆಸ್, ಯೋಗ ತರಬೇತಿಗಳಲ್ಲಿ ಭಾಗವಹಿಸುತ್ತಿದ್ದಾರೆ.