ನವದೆಹಲಿ: ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಇದೇ 24ರಂದು 47ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ಈ ಬಾರಿ ಜನ್ಮದಿನ ಆಚರಿಸದೇ ಇರಲು ಅವರು ನಿರ್ಧರಿಸಿದ್ದಾರೆ. ಕೋವಿಡ್ ಮಹಾಮಾರಿಯನ್ನು ಹೊಡೆದೋಡಿಸುವ ಸಲುವಾಗಿ ನಡೆಯುತ್ತಿರುವ ಹೋರಾಟದ ಮುಂಪಕ್ತಿಯಲ್ಲಿರುವವರ ಗೌರವಾರ್ಥ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
’ಇದು ಸಂಭ್ರಮಾಚರಣೆಗೆ ಸೂಕ್ತ ಸಮಯವಲ್ಲ. ವೈದ್ಯರು, ಸುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸ್, ರಕ್ಷಣಾ ದಳದ ಸಿಬ್ಬಂದಿಗೆ ಗೌರವ ಅರ್ಪಿಸುವುದಕ್ಕಾಗಿ ಈ ಬಾರಿ ಜನ್ಮದಿನಾಚರಣೆ ತ್ಯಾಗ ಮಾಡಲು ಸಚಿನ್ ಮುಂದಾಗಿದ್ದಾರೆ’ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 50 ಲಕ್ಷ ನೀಡಿರುವ ಸಚಿನ್, ಪರಿಹಾರಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಚಿನ್ ಜನ್ಮದಿನ ಆಚರಿಸಲು ಅವರ ಅಭಿಮಾನಿಗಳು ಸಿದ್ಧರಾಗಿದ್ದು ಸಾಮಾಜಿಕ ತಾಣಗಳಲ್ಲಿ ಈಗಾಗಲೇ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಸಂಘವೊಂದು ಬ್ಯಾಟಿಂಗ್ ದಿಗ್ಗಜನ ವಿವಿಧ ಭಂಗಿಯ 40 ಚಿತ್ರಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು ಮತ್ತೊಂದು ಸಂಘ ಸಚಿನ್ ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ಪ್ರಚಾರ ಮಾಡಲು ಮುಂದಾಗಿದೆ.