ಕೋಲ್ಕತ್ತ: ದೇಶಿ ಕ್ರಿಕೆಟ್ ದಿಗ್ಗಜ ಮುಂಬೈ ತಂಡದ ಬಹುದಿನಗಳ ಕನಸು ಶನಿವಾರ ನನಸಾಯಿತು. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು.
41 ಬಾರಿ ರಣಜಿ ಟ್ರೋಫಿ ಸೇರಿದಂತೆ ಎಲ್ಲ ದೇಶಿ ಟೂರ್ನಿಗಳಲ್ಲಿಯೂ ಚಾಂಪಿಯನ್ ಆಗಿತ್ತು. ಆದರೆ ಇದುವರೆಗೆ ದೇಶಿ ಟಿ20 ಟ್ರೋಫಿ ಮಾತ್ರ ಒಲಿದಿರಲಿಲ್ಲ. ಇದೀಗ ಮುಂಬೈನ ಈ ಕೊರತೆಯೂ ನೀಗಿದೆ. ಶನಿವಾರ ಈಡನ್ ಗಾರ್ಡನ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತನುಷ್ ಕೋಟ್ಯಾನ್ (15ಕ್ಕೆ3) ಅವರ ಉತ್ತಮ ಬೌಲಿಂಗ್ನಿಂದ ಮುಂಬೈ ತಂಡವು 3 ವಿಕೆಟ್ಗಳಿಂದ ಹಿಮಾಚಲಪ್ರದೇಶವನ್ನು ಸೋಲಿಸಿತು.
ಟಾಸ್ ಗೆದ್ದ ಮುಂಬೈ ತಂಡದ ಬೌಲರ್ಗಳಾದ ತನುಷ್ ಹಾಗೂ ಮೋಹಿತ್ ಅವಸ್ತಿ (21ಕ್ಕೆ3) ಹಿಮಾಚಲ ಪ್ರದೇಶದ ಬ್ಯಾಟರ್ಗಳಿಗೆ ಕಠಿಣ ಸವಾಲೊಡ್ಡಿದರು. ಹಿಮಾಚಲ ತಂಡವು ಏಕಾಂತ್ ಸೇನ್ (37; 29ಎಸೆತ, 4X3, 6X2) ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 143 ರನ್ ಗಳಿಸಿತು.
ಸಾಧಾರಣ ಗುರಿ ಬೆನ್ನಟ್ಟಿದ ಮುಂಬೈ ತಂಡವು 19.3 ಓವರ್ಗಳಲ್ಲಿ 7 ವಿಕೆಟ್ಗಳಿಗೆ 146 ರನ್ ಗಳಿಸಿ ಜಯಿಸಿತು. ಶ್ರೇಯಸ್ ಅಯ್ಯರ್ (34; 26ಎ, 4X4, 6X1) ಹಾಗೂ ಸರ್ಫರಾಜ್ ಖಾನ್ (ಔಟಾಗದೆ 36; 31ಎ, 4X3, 6X1) ತಂಡದ ಗೆಲುವಿಗೆ ಕಾಣಿಕೆ ನೀಡಿದರು.