ಬೆಂಗಳೂರು: ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ನಗರದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿದರು. ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಪದಾಧಿಕಾರಿಗಳ ಜೊತೆ ಸುಮಾರು ಒಂದು ಗಂಟೆ ಕಾಲ ಸಭೆ ನಡೆಸಿದರು.
ಸಭೆಯ ನಂತರ ಅವರು ವಿಮಾನ ನಿಲ್ದಾಣ ಬಳಿಯ ಅರೆಬಿನ್ನಮಂಗಲದಲ್ಲಿರುವ ಎನ್ಸಿಎ ಮೈದಾನಕ್ಕೆ ಭೇಟಿ ನೀಡಿದರು. ಈ ಜಾಗದಲ್ಲಿ ಎನ್ಸಿಎಗೆ ನೂತನ ಕಟ್ಟಡ, ಸುಸಜ್ಜಿತ ವಸತಿ ನಿಲಯ ಮತ್ತಿತರ ಮೂಲಸೌಲಭ್ಯ ಅಭಿವೃದ್ಧಿ ಪಡಿಸುವ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಸಬ್ ಏರ್ ವ್ಯವಸ್ಥೆ ವೀಕ್ಷಣೆ: ಗಂಗೂಲಿ ಅವರು ಇದೇ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸಬ್ ಏರ್ ವ್ಯವಸ್ಥೆಯನ್ನು ವೀಕ್ಷಿಸಿದರು.
‘ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಎಲ್ಲ ಪದಾಧಿಕಾರಿಗಳನ್ನು ಭೇಟಿಯಾಗಿದ್ದೆವು. ಕೆಎಸ್ಸಿಎ ಪರವಾಗಿ ಅಭಿನಂದಿಸಿದೆವು. ಸಬ್ ಏರ್ ವ್ಯವಸ್ಥೆ ಬಗ್ಗೆ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದರು' ಎಂದು ಕೆಎಸ್ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣಸಿಂಗ್ ಧುಮಾಲ್, ಸಿಇಒ ರಾಹುಲ್ ಜೊಹ್ರಿ, ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್, ಕೆಎಸ್ ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹಾಜರಿದ್ದರು.