ಬೆಂಗಳೂರು: ಆತಿಥೇಯ ಕರ್ನಾಟಕ ಮತ್ತು ಆಂಧ್ರಪ್ರದೇಶ ತಂಡಗಳು, ನಾಗೇಶ್ ಟ್ರೋಫಿಗಾಗಿ ನಡೆಯುತ್ತಿರುವ ಇಂಡಸ್ಇಂಡ್ ಬ್ಯಾಂಕ್ ರಾಷ್ಟ್ರೀಯ ಟಿ–20 ಅಂಧರ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದವು.
ಥಣಿಸಂದ್ರದ ಸಂಪ್ರಸಿದ್ಧಿ ಸ್ಪೋರ್ಟ್ಸ್ ಎಸ್ಟಡಿಯೊದಲ್ಲಿ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಕರ್ನಾಟಕ 7 ವಿಕೆಟ್ಗಳಿಂದ ಮಹಾರಾಷ್ಟ್ರ ಮೇಲೆ ಜಯಗಳಿಸಿದರೆ, ಆಂಧ್ರ ಪ್ರದೇಶ ಇಷ್ಟೇ ಅಂತರದಿಂದ ಹರಿಯಾಣ ತಂಡವನ್ನು ಸೋಲಿಸಿತು.
ಕರ್ನಾಟಕ ಪರ ಸುನೀಲ್ ಆರ್. 36 ಎಸೆತಗಳಲ್ಲಿ 11 ಬೌಂಡರಿಗಳಿದ್ದ 3 ರನ್ ಗಳಿಸಿ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು.
ಇಂದು ಫೈನಲ್: ಫೈನಲ್ ಪಂದ್ಯ ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗ ಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಗೆಲ್ಲುವ ತಂಡ ಟ್ರೋಫಿ ಜೊತೆಗೆ ₹ 1 ಲಕ್ಷ ನಗದು ಬಹುಮಾನ ಪಡೆಯಲಿದೆ. ರನ್ನರ್ ಅಪ್ ತಂಡ ₹ 75 ಸಾವಿರ ಹಾಗೂ ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೆ ತಲಾ ₹ 40 ಸಾವಿರ ಬಹುಮಾನ ನೀಡಲಾಗುವುದು.
ಸ್ಕೋರುಗಳು (ಸೆಮಿಫೈನಲ್): ಮಹಾರಾಷ್ಟ್ರ: 19.3 ಓವರುಗಳಲ್ಲಿ 119 (ದಿಲೀಪ್ ಶಿವಾಜಿ ಮುಂಡೆ 39, ಪ್ರವೀಣ್ ಕಾರ್ಲುಕೆ 38; ಶಂಭು 23ಕ್ಕೆ3); ಕರ್ನಾಟಕ: 10.3 ಓವರುಗಳಲ್ಲಿ 3 ವಿಕೆಟ್ಗೆ 120 (ಪ್ರಕಾಶ್ ಜಯರಾಮಯ್ಯ 31, ಸುನೀಲ್ ಆರ್. 63; ಪ್ರವೀಣ್ ಕಾರ್ಲುಕೆ 26ಕ್ಕೆ2).
ಹರಿಯಾಣ: 20 ಓವರುಗಳಲ್ಲಿ 7 ವಿಕೆಟ್ಗೆ 141 (ದೀಪಕ್ ಮಲಿಕ್ 42, ); ಆಂಧ್ರ ಪ್ರದೇಶ: 14.5 ಓವರುಗಳಲ್ಲಿ 3 ವಿಕೆಟ್ಗೆ 145 (ಟಿ.ಕೃಷ್ಣ ಔಟಾಗದೇ 51, ದುರ್ಗಾ ರಾವ್ 42).
ಸೌಕರ್ಯಕ್ಕೆ ಪ್ರಯತ್ನ: ಮಹಾಂತೇಶ್
ದೃಷ್ಟಿ ಸವಾಲುಳ್ಳವರ ಕ್ರಿಕೆಟ್ಗೆ ಉತ್ತೇಜಿಸಲು ಬೆಂಗಳೂರು ಹೊರವಲಯದಲ್ಲಿ 25 ಎಕರೆ ಭೂಮಿಯನ್ನು ಹೊಂದಲು ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಪ್ರಯತ್ನಿಸುತ್ತಿದೆ. ಸರ್ಕಾರವೂ ಜಾಗ ಗುರುತಿಸಲು ಹೇಳಿದೆ ಎಂದು ಸಿಎನಿಐ ಅಧ್ಯಕ್ಷ ಹಾಗೂ ಸಮರ್ಥನಂ ಟ್ರಸ್ಟ್ ಫಾರ್ ದಿ ದಿಸೇಬಲ್ಡ್ ಮಹಾಂತೇಶ್ ಜಿ.ಕೆ. ಹೇಳಿದರು.
ಇಲ್ಲಿ ಕ್ರೀಡಾಂಗಣದ ಜೊತೆ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಶಾಲಾ ಮಟ್ಟದಲ್ಲೇ ಅಂಧ ಕ್ರಿಕೆಟ್ ಪ್ರತಿಭೆಗಳ ಶೋಧಕ್ಕೆ ಯೋಜನೆ ಹಾಕಿಕೊಳ್ಳಲಾಗುವುದು ಎಂದೂ ಹೇಳಿದರು.
ಹಿರಿಯ ಆಟಗಾರ ಹಾಗೂ ಸಿಎಬಿಐ ಖಜಾಂಚಿ ಚಂದ್ರಶೇಖರ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.