ನವದೆಹಲಿ: ಐಸಿಸಿ ಟಿ–20 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದ ಭಾರತ ಕ್ರಿಕೆಟ್ ತಂಡದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು, ಮಾಜಿ ಆಟಗಾರರು ಭಾರತ ತಂಡದ ಪ್ರದರ್ಶನಕ್ಕೆ ಕಿಡಿ ಕಾರುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಹಾಗೂ 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ನಾಯಕ ಕಪಿಲ್ ದೇವ್ ಅವರು ಸೋತ ಭಾರತ ತಂಡವನ್ನು ‘ಚೋಕರ್ಸ್‘ ಎಂದು ಕರೆದಿದ್ದಾರೆ.
‘ಭಾರತ ತಂಡವನ್ನು ಚೋಕರ್ಸ್ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಕೊನೆವರೆಗೂ ಬಂದು ಸೋಲುತ್ತಾರೆ‘ ಎಂದು ಕಪಿಲ್ ದೇವ್ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಅಲ್ಲದೇ ಇದೇ ವೇಳೆ ಭಾರತ ತಂಡವನ್ನು ಅತಿಯಾಗಿ ಟೀಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
‘ಭಾರತ ತಂಡವು ಕೆಟ್ಟ ಆಟ ಆಡಿದೆ ನಿಜ. ಆದರೆ ನಾವು ಆಟಗಾರರನ್ನು ತೀವ್ರವಾಗಿ ಟೀಕೆ ಮಾಡುವುದು ಬೇಡ. ಒಂದು ಪಂದ್ಯದಿಂದ ಇಡೀ ತಂಡವನ್ನು ಟೀಕೆಗೆ ಗುರಿಪಡಿಸುವುದು ಸರಿಯಲ್ಲ‘ ಎಂದು ಅವರು ಹೇಳಿದ್ದಾರೆ.
ಗುರುವಾರ ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್ಗಳಿಂದ ಸೋಲು ಅನುಭಿಸಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು.