ರಾಯಪುರ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಶನಿವಾರ ಇಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.
ಶುಭಮನ್ ಗಿಲ್ ಅಬ್ಬರದ ದ್ವಿಶತಕದ ಬಲದಿಂದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ತಂಡವು ಸರಣಿ ಕೈವಶದ ಮೇಲೆ ಕಣ್ಣಿಟ್ಟಿದೆ. ಹೈದರಾಬಾದಿನ ಪಂದ್ಯದಲ್ಲಿ ಬೃಹತ್ ಮೊತ್ತದ ಗುರಿಯೊಡ್ಡಿದ್ದ ಭಾರತ ತಂಡವು ಸುಲಭ ಜಯ ಸಾಧಿಸಿರಲಿಲ್ಲ.
ಕಿವೀಸ್ ತಂಡದ ಅಗ್ರಕ್ರಮಾಂಕದ ಬ್ಯಾಟರ್ಗಳನ್ನು ಬೇಗನೇ ನಿಯಂತ್ರಿಸಿದ್ದ ಬೌಲರ್ಗಳು ಮಧ್ಯಮಕ್ರಮಾಂಕವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿತ್ತು. 350 ರನ್ಗಳ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ 131 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಮಿಚೆಲ್ ಬ್ರೇಸ್ವೆಲ್ ಅಬ್ಬರದ ಶತಕದಿಂದಾಗಿ ಗೆಲುವಿನ ಸನಿಹ ಸಾಗಿತು. ಕೊನೆಗೂ 12 ರನ್ಗಳಿಂದ ಜಯಿಸುವಲ್ಲಿ ಆತಿಥೇಯರು ಸಫಲರಾದರು.
ಶಾರ್ದೂಲ್ ಠಾಕೂರ್ ಮತ್ತು ಸಿರಾಜ್ ಅವರಿಬ್ಬರು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ರನ್ಗಳನ್ನು ನಿಯಂತ್ರಿಸುವಲ್ಲಿ ಅವರೂ ಸೇರಿದಂತೆ ಆರು ಬೌಲರ್ಗಳು ಸಫಲರಾಗಿರಲಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಶಾರ್ದೂಲ್ ಅವರ ಬದಲಿಗೆ ಕಾಶ್ಮೀರ್ ಎಕ್ಸ್ಪ್ರೆಸ್ ಉಮ್ರಾನ್ ಮಲಿಕ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಲಯಕ್ಕೆ ಮರಳಿದರೆ, ಕಿವೀಸ್ ಬೌಲಿಂಗ್ ಪಡೆಗೆ ಕಠಿಣ ಸವಾಲಾಗಬಹುದು.
ಪಿಚ್ ಹೇಗಿದೆ: ರಾಯಪುರದ ಶಹೀದ್ ವಿರನಾರಾಯಣ ಸಿಂಗ್ ಕ್ರೀಡಾಂಗಣದ ಪಿಚ್ ಬ್ಯಾಟರ್ಗಳಿಗೆ ಹೆಚ್ಚು ನೆರವಾಗುವ ಲಕ್ಷಣಗಳಿವೆ.