ಕ್ರೈಸ್ಟ್ಚರ್ಚ್ (ಪಿಟಿಐ): ಬುಧವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಸರಣಿಯ ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡವು ಎರಡನೇ ಪಂದ್ಯದಲ್ಲಿ ಗೆದ್ದು ಸಮಬಲ ಸಾಧಿಸುವ ಆಸೆಯು ಮಳೆಯಲ್ಲಿ ಕೊಚ್ಚಿಹೋಗಿತ್ತು. ಆದ್ದರಿಂದ ಮೂರನೇ ಪಂದ್ಯ ನಡೆದರೆ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಒಂದು ಅವಕಾಶ ಶಿಖರ್ ಧವನ್ ಬಳಗಕ್ಕೆ ಲಭಿಸಲಿದೆ. ಅಲ್ಲದೇ ಆತಿಥೇಯರಿಗೂ ಜಯದ ಅವಕಾಶ ಸಿಗಲಿದ್ದು, ಟಿ20 ಸರಣಿ ಸೋಲಿನ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.
ಟಿ20 ಸರಣಿಯಲ್ಲಿಯೂ ಮಳೆಯ ಆಟವೇ ಹೆಚ್ಚು ನಡೆದಿತ್ತು. ಮೊದಲ ಪಂದ್ಯವು ರದ್ದಾಗಿತ್ತು. ಎರಡನೇಯದ್ದರಲ್ಲಿ ಭಾರತ ಜಯಿಸಿತ್ತು. ಮೂರನೇ ಪಂದ್ಯಕ್ಕೂ ಮಳೆ ತಡೆಯೊಡ್ಡಿದ್ದಾಗ ಡಕ್ವರ್ಥ್ –ಲೂಯಿಸ್ ನಿಯಮದಲ್ಲಿ ಟೈ ಆಗಿತ್ತು. ಅದರಿಂದಾಗಿ ಭಾರತಕ್ಕೆ ಸರಣಿ ಒಲಿದಿತ್ತು.
ಆದರೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೂನ್ನೂರಕ್ಕೂ ಹೆಚ್ಚು ರನ್ಗಳ ಗುರಿ ನೀಡಿದ್ದ ಭಾರತ ತಂಡ ಬೌಲಿಂಗ್ನಲ್ಲಿ ಹಿನ್ನಡೆ ಅನುಭವಿಸಿತ್ತು. ಟಾಮ್ ಲಥಾಮ್ ಶತಕ ಹೊಡೆದು ತಮ್ಮ ತಂಡವನ್ನು ಗೆಲ್ಲಿಸಿದ್ದರು.
ಈ ಪಂದ್ಯದಲ್ಲಿಯೂ ಉಭಯ ತಂಡಗಳು ಯಾವುದೇ ಬದಲಾವಣೆ ಇಲ್ಲದೇ ಕಣಕ್ಕಿಳಿಯುವ ಸಾಧ್ಯತೆ ಇದೆ.