ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುದುಚೇರಿಗೆ ಮನೀಷ್ ಪಾಂಡೆ ಭಯ: ಕರ್ನಾಟಕಕ್ಕೆ ವಿನಯ್ ಸವಾಲು

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಕ್ವಾರ್ಟರ್‌ಫೈನಲ್ ಇಂದು
Last Updated 19 ಅಕ್ಟೋಬರ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದ ವಿರುದ್ಧ ಆಡುತ್ತೇನೆ ಎಂದು ಯಾವಾಗಲೂ ಅಂದುಕೊಂಡಿರಲಿಲ್ಲ. ಈಗ ಎದುರಾಳಿಯಾಗಿ ಆಡುವ ಸಮಯ ಬಂದೇಬಿಟ್ಟಿದೆ. ಇದೊಂದು ಭಾವನಾತ್ಮಕ ವಿಷಯ. ಆದರೆ, ನಾನು ‍ಪ್ರತಿನಿಧಿಸುವ ತಂಡಕ್ಕೆ ನಿಷ್ಠನಾಗಿ ಆಡುವುದು ಕರ್ತವ್ಯ’–

ಐದು ವರ್ಷಗಳ ಹಿಂದೆ ಸತತ ಎರಡು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡದ ನಾಯಕರಾಗಿದ್ದ ‘ದಾವಣಗೆರೆ ಎಕ್ಸ್‌ಪ್ರೆಸ್‌’ ಆರ್. ವಿನಯಕುಮಾರ್ ಅವರ ಮಾತುಗಳಿವು.

ಭಾನುವಾರ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಅವರು ಪುದುಚೇರಿ ಪರವಾಗಿ ಕರ್ನಾಟಕದ ಎದುರು ಕಣಕ್ಕಿಳಿಯಲಿದ್ಧಾರೆ. ಶನಿವಾರ ಮಧ್ಯಾಹ್ನ ಅಭ್ಯಾಸ ನಡೆಸಲು ಕ್ರೀಡಾಂಗಣಕ್ಕೆ ಬಂದ ಅವರ ಮುಖದಲ್ಲಿ ಭಾವನೆಗಳ ತಾಕಲಾಟವಿತ್ತು. ಕಂಗಳಲ್ಲಿ ಹಳೆಯ ನೆನಪುಗಳು ಸುಳಿದಾಡಿದ್ದವು.

‘ಹೌದು; ನನ್ನದೇ ತವರು, ನಮ್ಮದೇ ಅಂಗಳ ಮತ್ತು ಆತ್ಮೀಯ ಗೆಳೆಯರ ಎದುರು ಬೇರೆ ವರ್ಣದ ಜರ್ಸಿ (ತಂಡದ ಪೋಷಾಕು)ಯೊಂದಿಗೆ ಕಣಕ್ಕಿಳಿಯುತ್ತಿದ್ದೇನೆ. ಐಪಿಎಲ್‌ನಲ್ಲಿ ನನ್ನ ಸಹಆಟಗಾರರು ಬೇರೆ ಬೇರೆ ತಂಡಗಳಲ್ಲಿ ಆಡುವಾಗ ಅವರಿಗೆ ಎದುರಾಳಿಯಾಗಿ ಬೌಲಿಂಗ್ ಮಾಡಿದ್ದೇನೆ. ಅದೇ ರೀತಿ ಇದು ಕೂಡ ಅಂದುಕೊಂಡಿದ್ದೇನೆ’ ಎಂದು ತಮ್ಮ ಧೃಢವಿಶ್ವಾಸವನ್ನು ಬಹಿರಂಗಪಡಿಸಿದರು.

ಅವರ ನಿರ್ಗಮನದ ನಂತರ ಕರ್ನಾಟಕ ತಂಡದ ನಾಯಕತ್ವ ವಹಿಸಿರುವ ಮನೀಷ್ ಪಾಂಡೆ ಈಗ ಅಮೋಘ ಲಯದಲ್ಲಿದ್ದಾರೆ. ಗುಂಪು ಹಂತದಲ್ಲಿ 505 ರನ್‌ಗಳನ್ನು ಗಳಿಸಿರುವ ಅವರ ಸಾಧನೆಯನ್ನೂ ವಿನಯ್ ಮುಕ್ತಕಂಠದಿಂದ ಹೊಗಳಿದರು. ಆದರೆ, ಎಂಟರ ಘಟ್ಟದ ಪಂದ್ಯದಲ್ಲಿ ಗೆಲ್ಲಬೇಕಾದರೆ ಅವರ ಬ್ಯಾಟಿಂಗ್‌ಗೆ ತಡೆಯೊಡ್ಡುವ ವಿಶ್ವಾಸವೂ ಅವರಿಗೆ ಇದೆ. ಉತ್ತಮ ಲಯದಲ್ಲಿರುವ ದೇವದತ್ತ ಪಡಿಕ್ಕಲ್, ಕೆ.ಎಲ್. ರಾಹುಲ್, ಮಧ್ಯಮ ಕ್ರಮಾಂಕದಲ್ಲಿ ಕೆ. ಗೌತಮ್, ಬಿ.ಆರ್. ಶರತ್ ಮತ್ತು ಶ್ರೇಯಸ್ ಗೋಪಾಲ್ ಅವರಿಂದಾಗಿ ಕರ್ನಾಟಕದ ಬ್ಯಾಟಿಂಗ್ ಬಲ ಆಳವಾಗಿದೆ. ಇದರ ಅರಿವು ಕೂಡ ವಿನಯಕುಮಾರ್‌ಗೆ ಇದೆ.

ಆದರೆ ಪುದುಚೇರಿ ತಂಡದ ಬ್ಯಾಟಿಂಗ್ ಪಡೆಗೆ ವಿನಯ್ ಅವರ ಗೆಳೆಯ ಅಭಿಮನ್ಯು ಮಿಥುನ್ ಸಿಂಹಸ್ವಪ್ನರಾಗಬಹುದು. ಈ ಟೂರ್ನಿಯಲ್ಲಿ ಶಿಸ್ತಿನ ಬೌಲಿಂಗ್ ಮಾಡುತ್ತಿರುವ ಯುವಪ್ರತಿಭೆ ಪ್ರಸಿದ್ಧ ಎಂ ಕೃಷ್ಣ, ರೋನಿತ್ ಮೋರೆ ಅವರೂ ಕೂಡ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆಯಾದರೆ ಅಚ್ಚರಿಯೇನಿಲ್ಲ. ಇದೇ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶಿಸಿರುವ ಪುದುಚೇರಿ ತಂಡವು ಬ್ಯಾಟಿಂಗ್‌ನಲ್ಲಿ ಪಾರಸ್ ಡೋಗ್ರಾ ಮತ್ತು ಅರುಣ್ ಕಾರ್ತಿಕ್ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.

‘ನಮ್ಮ ತಂಡದಲ್ಲಿಯೂ ಪ್ರತಿಭಾವಂತ ಆಟಗಾರರಿದ್ದಾರೆ. ಪುದುಚೇರಿ ತಂಡವನ್ನು ಸಣ್ಣದೆಂದು ಪರಿಗಣಿಸಬೇಡಿ. ತರಬೇತಿ ಸೌಲಭ್ಯಗಳು, ಆಟಗಾರರ ವೃತ್ತಿಪರತೆ ಉನ್ನತ ದರ್ಜೆಯಲ್ಲಿವೆ. ಬಲಿಷ್ಠ ತಂಡವಾಗಿರುವ ಕರ್ನಾಟಕಕ್ಕೆ ಕಠಿಣ ಸವಾಲು ಒಡ್ಡುವ ಸಾಮರ್ಥ್ಯ ನಮಗಿದೆ’ ಎಂದು ವಿನಯಕುಮಾರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಉತ್ತಮ ಲಯದಲ್ಲಿರುವ ಕರ್ನಾಟಕದ ಆರಂಭಿಕ ಜೋಡಿ ಮತ್ತು ಮಧ್ಯಮ ಕ್ರಮಾಂಕದ ಪಾಂಡೆ ಅವರನ್ನು ಕಟ್ಟಿಹಾಕುವಲ್ಲಿ ವಿನಯ್ ಅನುಭವ ಕೆಲಸ ಮಾಡಿದರೆ, ಪುದುಚೇರಿಯ ಆತ್ಮವಿಶ್ವಾಸ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ನಾಯಕತ್ವ ಮತ್ತು ಸಲೀಸಾದ ಬೀಸಾಟದಲ್ಲಿ ಪಳಗಿರುವ ಪಾಂಡೆಯೇನಾದರೂ ಮತ್ತೆ ಮಿಂಚಿದರೆ ದಾಮೋದರನ್ ರೋಹಿತ್ ನಾಯಕತ್ವದ ಪುದುಚೇರಿ ಕೂಡ ತಲೆಬಾಗುವುದು ಖಚಿತ.

ಹತ್ತು ಒಳ್ಳೆಯ ಎಸೆತಗಳನ್ನು ಹಾಕುವುದು ಅವಶ್ಯಕ: ಜ್ಯಾಕ್
ಕರ್ನಾಟಕ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ಆದರೆ ನಮ್ಮ ಬೌಲರ್‌ಗಳೂ ಪ್ರತಿಭಾವಂತರಾಗಿದ್ದಾರೆ. ಹತ್ತು ಒಳ್ಳೆಯ ಎಸೆತಗಳನ್ನು (ವಿಕೆಟ್‌ ಪತನಕ್ಕೆ) ಹಾಕಲು ಮಾತ್ರ ಅವರಿಗೆ ಸಾಧ್ಯವಾಗಬೇಕು ಎಂದು ಪುದುಚೇರಿ ತಂಡದ ಕೋಚ್, ಕನ್ನಡಿಗ ಜೆ. ಅರುಣ್ ಕುಮಾರ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮನೀಷ್ ಪಾಂಡೆ ಒಳ್ಳೆಯ ಫಾರ್ಮ್‌ನಲ್ಲಿದ್ಧಾರೆ. ಅವರನ್ನು ಬೇಗ ನಿಯಂತ್ರಿಸಿದರೆ ಒಳ್ಳೆಯದು. ಉಳಿದ ಬ್ಯಾಟ್ಸ್‌ಮನ್‌ಗಳೂ ಕೂಡ ಚೆನ್ನಾಗಿ ಆಡುತ್ತಾರೆ ಅವರಿಗೂ ಹೆಚ್ಚು ರನ್‌ ಹೊಡೆಯುವ ಅವಕಾಶ ಕೊಡಬಾರದು ಎಂಬುದೇ ನಮ್ಮ ಗುರಿ’ ಎಂದರು.

**
ನಾಳೆ (ಭಾನುವಾರ) ಹೊಸ ದಿನ. ನಡೆಯಲಿರುವ ಪಂದ್ಯವೂ ಹೊಸದು. ಸೊನ್ನೆಯಿಂದ ಎಲ್ಲವೂ ಶುರುವಾಗುತ್ತದೆ. ಆ ದಿನದಾಟದಲ್ಲಿ ಯಾರು ಉತ್ತಮವಾಗಿ ಆಡುತ್ತಾರೋ ಅವರಿಗೇ ಯಶಸ್ಸು. ತಂಡಗಳ ಹಿಂದಿನ ಬಲಾಬಲಕ್ಕಿಂತ ದಿನದಾಟವೇ ಮೇಲಾಗುತ್ತದೆ
–ಆರ್. ವಿನಯಕುಮಾರ್
ಪುದುಚೇರಿ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT