ಮೈಸೂರು: ಇಲ್ಲಿನ ವಿಜಯನಗರ ನಾಲ್ಕನೇ ಹಂತದ ನಿವಾಸಿ ಸಾಫ್ಟ್ವೇರ್ ಎಂಜಿನಿಯರ್ ಪ್ರಜ್ವಲ್ (45) ಎಂಬುವರು ತಮ್ಮ ಪತ್ನಿ ಹಾಗೂ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸವಿತಾ (38) ಮತ್ತು ಮಗಳು ಸಿಂಚನಾ (10) ಕೊಲೆಯಾದವರು. ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಜ್ವಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 23ರಂದು ಪತ್ನಿ, ಮಗಳ ಕೊಲೆಮಾಡಿ, ಒಂದು ರಾತ್ರಿಯನ್ನು ಮೃತದೇಹಗಳ ಜತೆ ಕಳೆದಿದ್ದಾರೆ. ಮೇ 24ರ ರಾತ್ರಿ ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದಾಗ ಪ್ರಕರಣ ಬಯಲಾಗಿದೆ.
ನಂಜನಗೂಡಿನ ಪ್ರಜ್ವಲ್ ಮತ್ತು ಕೆ.ಆರ್.ಪೇಟೆಯ ಸವಿತಾ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರು. ಪ್ರಜ್ವಲ್ ಕೆಲಸ ಮಾಡುತ್ತಿದ್ದ ಕಂಪನಿ ಕೆಲ ತಿಂಗಳ ಹಿಂದೆ ಮುಚ್ಚಿತ್ತು. ಬೇರೆ ಕಡೆ ಪ್ರಯತ್ನಿಸಿದ್ದರೂ ಉದ್ಯೋಗ ದೊರೆತಿರಲಿಲ್ಲ. ಮೈಸೂರಿನಲ್ಲಿ ನೆಲೆಸಿರುವ ತಂದೆಯ ಸೂಚನೆಯಂತೆ ಕುಟುಂಬ ಸಮೇತ ಮೈಸೂರಿಗೆ ವಾಸ ಬದಲಿಸಿದ್ದರು. ಸವಿತಾ ಸಹ ಕೆಲಸ ತೊರೆದಿದ್ದರು.
‘ಉದ್ಯೋಗ ದೊರೆಯದ ಹತಾಶೆ ಮತ್ತು ಸಂಸಾರ ನಿರ್ವಹಣೆಯ ಭಾರ ತಾಳಲಾರದೆ ಈ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.