ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಲ್‌ ಕೆಚ್ಚೆದೆಯ ಆಟ

Last Updated 8 ಮೇ 2019, 16:34 IST
ಅಕ್ಷರ ಗಾತ್ರ

ಅದಾಗಲೇ ನಾಕೌಟ್‌ ಲೆಕ್ಕಾಚಾರ ಶುರುವಾಗಿತ್ತು. ಆಡಿದ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಸೋತಿದ್ದ ಭಾರತ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಎದುರಿನ ಅಂತಿಮ ಎರಡು ಹೋರಾಟಗಳಲ್ಲಿ ಗೆಲ್ಲಲೇಬೇಕಿತ್ತು. ಹೀಗಾಗಿ ಜೂನ್ 18ರಂದು ನೆವಿಲ್‌ ಮೈದಾನದಲ್ಲಿ ನಿಗದಿಯಾಗಿದ್ದ ಜಿಂಬಾಬ್ವೆ ವಿರುದ್ಧದ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿತ್ತು. ಅಂದು ಕಪಿಲ್‌ ದೇವ್‌ ಕಟ್ಟಿದ ಇನಿಂಗ್ಸ್‌ ಕ್ರಿಕೆಟ್‌ ಪ್ರಿಯರ ಮನ ಗೆದ್ದಿತ್ತು. ಕಪಿಲ್‌ ಸಿಡಿಸಿದ ಆ ಶತಕ ವಿಶ್ವಕಪ್‌ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾಗಿತ್ತು.

*ಟಾಸ್‌ ಗೆದ್ದ ಭಾರತ, ಬ್ಯಾಟಿಂಗ್‌ ಮಾಡಲು ನಿರ್ಧರಿಸಿತ್ತು. ಈ ಲೆಕ್ಕಾಚಾರ ಆರಂಭದಲ್ಲೇ ತಲೆಕೆಳಗಾಗಿತ್ತು.

*ತಂಡವು ಒಂಬತ್ತು ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು.

*ಆರಂಭಿಕರಾದ ಸುನಿಲ್ ಗಾವಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್‌ ಶೂನ್ಯಕ್ಕೆ ಔಟಾಗಿದ್ದರು. ಮೋಹಿಂದರ್‌ ಅಮರನಾಥ್‌ (5), ಸಂದೀಪ್ ಪಾಟೀಲ್‌ (1) ಮತ್ತು ಯಶ್‌ಪಾಲ್‌ ಶರ್ಮಾ (9) ಕೂಡಾ ವಿಕೆಟ್‌ ನೀಡಲು ಅವಸರಿಸಿದ್ದರು.

*ಕೆವಿನ್‌ ಕರನ್‌ ಮತ್ತು ಪೀಟರ್‌ ರಾಸನ್‌ ದಾಳಿಗೆ ತತ್ತರಿಸಿದ್ದ ತಂಡವು 70ರನ್‌ಗಳ ಗಡಿ ದಾಟುವುದೇ ಅನುಮಾನ ಎನಿಸಿತ್ತು.

*ಪ್ರಮುಖರು ಪೆವಿಲಿಯನ್‌ ಸೇರಿದ್ದರೂ ನಾಯಕ ಕಪಿಲ್‌ ಮಾತ್ರ ಎದೆಗುಂದಲಿಲ್ಲ. ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಪಂದ್ಯದ ಚಿತ್ರಣವನ್ನೇ ಬದಲಿಸಿದ್ದರು.

*ಕಪಿಲ್‌, ಕ್ರೀಸ್‌ನಲ್ಲಿದ್ದಷ್ಟೂ ಸಮಯ ಪ್ರೇಕ್ಷಕರೇ ಕ್ಷೇತ್ರರಕ್ಷಕರಾಗಿದ್ದರು. ಅವರು ಬೌಂಡರಿ (16) ಮತ್ತು ಸಿಕ್ಸರ್‌ಗಳ (6) ಮೂಲಕವೇ ಶತಕ ಸಿಡಿಸಿದ್ದರು!

*138 ಎಸೆತಗಳನ್ನು ಆಡಿದ್ದ ಕಪಿಲ್‌ 175ರನ್‌ ಗಳಿಸಿ ಅಜೇಯವಾಗುಳಿದಿದ್ದರು. ವಿಶ್ವಕಪ್‌ನಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ ಎಂಬ ಹಿರಿಮೆ ಅವರದ್ದಾಗಿತ್ತು.

*ಕರ್ನಾಟಕದ ರೋಜರ್‌ ಬಿನ್ನಿ (22) ಮತ್ತು ಸೈಯದ್‌ ಕಿರ್ಮಾನಿ (ಔಟಾಗದೆ 24) ಅವರ ಕಾಣಿಕೆಯೂ ಮಹತ್ವದ್ದಾಗಿತ್ತು.

*ಒಂಬತ್ತನೇ ವಿಕೆಟ್‌ಗೆ ಕಪಿಲ್‌ ಮತ್ತು ಕಿರ್ಮಾನಿ 126ರನ್‌ಗಳ ಜೊತೆಯಾಟ ಆಡಿದ್ದರು. ತಂಡ 60 ಓವರ್‌ಗಳಲ್ಲಿ 8 ವಿಕೆಟ್‌ಗೆ 266ರನ್ ಗಳಿಸಿತ್ತು.

*ಜಿಂಬಾಬ್ವೆ ಕೂಡಾ ಆರಂಭಿಕ ಸಂಕಷ್ಟ ಎದುರಿಸಿತ್ತು. ಈ ತಂಡ 113ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿತ್ತು.

*ಕೆವಿನ್‌ ಕರನ್‌ (73; 93ಎ, 8ಬೌಂ) ಕ್ರೀಸ್‌ನಲ್ಲಿದ್ದಷ್ಟು ಸಮಯ ಭಾರತದ ಪಾಳಯದಲ್ಲಿ ಆತಂಕ ಮನೆಮಾಡಿತ್ತು.

*ಮದನ್‌ ಲಾಲ್‌, ಕರನ್‌ ವಿಕೆಟ್‌ ಕಬಳಿಸಿ ಕಪಿಲ್‌ ಪಡೆಯ ಆಟಗಾರರ ಸಂಭ್ರಮಕ್ಕೆ ಕಾರಣರಾಗಿದ್ದರು.

*ಮದನ್‌ ಮೂರು ವಿಕೆಟ್‌ ಪಡೆದರೆ, ರೋಜರ್‌ ಬಿನ್ನಿ ಎರಡು ವಿಕೆಟ್‌ ಉರುಳಿಸಿದ್ದರು.

*ಜೂನ್‌ 20 ರಂದು ಚೆಮ್ಸ್‌ಫೋರ್ಡ್‌ನ ಕೌಂಟಿ ಮೈದಾನದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯವೂ ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಆ ಹಣಾಹಣಿಯಲ್ಲಿ ತಂಡ 118ರನ್‌ಗಳಿಂದ ಜಯಭೇರಿ ಮೊಳಗಿಸಿತ್ತು.

*ಮೊದಲು ಬ್ಯಾಟ್‌ ಮಾಡಿದ್ದ ಭಾರತ 55.5 ಓವರ್‌ಗಳಲ್ಲಿ 247ರನ್‌ ಗಳಿಸಿದರೆ, ಆಸ್ಟ್ರೇಲಿಯಾ 38.2 ಓವರ್‌ಗಳಲ್ಲಿ 129ರನ್‌ಗಳಿಗೆ ಹೋರಾಟ ಮುಗಿಸಿತ್ತು.

*ರೋಜರ್‌ ಬಿನ್ನಿ ಮತ್ತು ಮದನ್‌ ಲಾಲ್‌ ತಲಾ ನಾಲ್ಕು ವಿಕೆಟ್‌ ಪಡೆದು ಪಂದ್ಯದ ದಿಕ್ಕು ಬದಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT