ಮುಂಬೈ: ಲೆಗ್ ಸ್ಪಿನ್ನರ್ಗಳನ್ನು ಮ್ಯಾಚ್ ವಿನ್ನರ್ಗಳೆಂದು ಯಾಕೆ ಪರಿಗಣಿಸುತ್ತೇವೆ ಎಂಬುದನ್ನು ಯಜುವೇಂದ್ರ ಚಾಹಲ್ ನಿನ್ನೆಯ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಶ್ಲಾಘಿಸಿದ್ದಾರೆ.
ಸೋಮವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ನಡೆದ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯದ 17ನೇ ಓವರ್ನಲ್ಲಿ ಚಾಹಲ್ ಹ್ಯಾಟ್ರಿಕ್ (ಪ್ರಸಕ್ತ ಋತುವಿನ ಚೊಚ್ಚಲ ಹ್ಯಾಟ್ರಿಕ್) ಸೇರಿದಂತೆ 4 ವಿಕೆಟ್ ಪಡೆದು ಮಿಂಚಿದ್ದರು. ಪಂದ್ಯದಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದರು.
17ನೇ ಓವರ್ನ ಮೊದಲ ಎಸೆತದಲ್ಲಿ ವೆಂಕಟೇಶ್ ಅಯ್ಯರ್ (6) ಅವರನ್ನು ಔಟ್ ಮಾಡಿದ ಚಾಹಲ್, ನಂತರದ ಎಸೆತಗಳಲ್ಲಿ ಶ್ರೇಯಸ್ ಅಯ್ಯರ್ (85), ಶಿವಂ ಮಾವಿ (0) ಹಾಗೂ ಪ್ಯಾಟ್ ಕಮಿನ್ಸ್ (0) ಅವರನ್ನು ಪೆವಿಲಿಯನ್ಗೆ ಕಳುಹಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದರು.
‘ಚಾಹಲ್ಗೆ ಅಂತರರಾಷ್ಟ್ರೀಯ ಮಟ್ಟದ ಅನುಭವ ಹೆಚ್ಚಿದೆ. ಅವರು ಟೂರ್ನಿಯಲ್ಲಿ ಹಾಗೂ ದೇಶದಲ್ಲೇ ಹೆಚ್ಚು ಅನುಭವ ಹೊಂದಿರುವ ಲೆಗ್ ಸ್ಪಿನ್ನರ್. ಕೌಶಲವನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಂಡಿರಬೇಕು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದಕ್ಕೆ ತಾವು ಸೂಕ್ತ ಎಂಬುದನ್ನು ಅವರು ತೋರಿಸಿಕೊಟ್ಟಿರುವುದು ಮಹತ್ವದ್ದಾಗಿದೆ’ ಎಂದು ಮಾಲಿಂಗ ಹೇಳಿದ್ದಾರೆ.
‘ಲೆಗ್ ಸ್ಪಿನ್ನರ್ಗಳಿಗೆ ವಿಕೆಟ್ ಪಡೆಯುವ ಹೆಚ್ಚು ಅವಕಾಶಗಳಿರುತ್ತವೆ. ಹೇಗೆ ವಿಕೆಟ್ ಪಡೆಯಬಹುದು ಎಂಬುದನ್ನು ಚಾಹಲ್ ತೋರಿಸಿಕೊಟ್ಟಿದ್ದಾರೆ. ತಾವು ಮ್ಯಾಚ್ ವಿನ್ನರ್ಗಳು ಎಂಬುದನ್ನು ಅವರು ಎಲ್ಲ ಲೆಗ್ ಸ್ಪಿನ್ನರ್ಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.