ಚೆನ್ನೈ:ಮಹೇಂದ್ರ ಸಿಂಗ್ ಧೋನಿ ಬದಲಿಗೆ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಬುಧವಾರದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದರು. 2010ರ ನಂತರ ಇದೇ ಮೊದಲ ಬಾರಿ ಧೋನಿ ಇಲ್ಲದೆ ತಂಡ ಕಣಕ್ಕೆ ಇಳಿದಿತ್ತು.
ಬೆನ್ನು ನೋವಿನಿಂದ ಬಳಲುತ್ತಿರುವ ಧೋನಿ ಪಂದ್ಯ ಆರಂಭವಾಗುವುದಕ್ಕೂ ಮೊದಲು ಸಹ ಆಟಗಾರರ ಜೊತೆ ‘ಫುಟ್ಬಾಲ್’ ಆಡಿದ್ದರು. ನಂತರ ಅವರಿಗೆ ವಿಶ್ರಾಂತಿ ನೀಡಿರುವ ವಿಷಯವನ್ನು ಪ್ರಕಟಿಸಲಾಯಿತು. ಸ್ಯಾಮ್ ಬಿಲಿಂಗ್ಸ್ ಅವರ ಹೆಗಲಿಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವಹಿಸಲಾಗಿತ್ತು.
ಕತ್ತು ನೋವಿನಿಂದ ಬಳಲುತ್ತಿರುವ ಹರಭಜನ್ ಸಿಂಗ್ ಕೂಡ ಈ ಪಂದ್ಯದಲ್ಲಿ ಕಣಕ್ಕೆ ಇಳಿಯಲಿಲ್ಲ. ಮಿಷೆಲ್ ಸ್ಯಾಂಟನರ್ ಬದಲಿಗೆ ಕರಣ್ ಶರ್ಮಾ ಅವರಿಗೆ ಸ್ಥಾನ ನೀಡಲಾಗಿತ್ತು.