ಆಳಂದ: ‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆಗಳು ಹಿಂದೆ ಬೀಳುತ್ತಿವೆ. ಕಲಿಕಾ ವಾತಾವರಣ ಸರಿಯಾಗಿಲ್ಲ. ಶಿಕ್ಷಕರು, ಪಾಲಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕಿನ ಖಜೂರಿಯ ನಿಜಾಚರಣೆ ಕನ್ನಡ ಶಾಲೆಯಲ್ಲಿ ಸೋಮವಾರ ಶಾಲಾ ಆರಂಭೋತ್ಸವದ ನಿಮಿತ್ತ ಶಿಕ್ಷಣದ ಮಹತ್ವ ಸಾರುವ ಪ್ರಭಾತಫೇರಿ ನಡೆಸಿ ಮಾತನಾಡಿದರು. ‘ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಚರಮೂರ್ತಿ ನೀಲಲೋಚನಾ ತಾಯಿ, ಮುಖ್ಯಗುರು ಸುಭಾಷ ಹರಳಯ್ಯ, ಕುಮಾರ ಬಂಡೆ, ಶರಣಬಸಪ್ಪ ಶಿವಮೂರ್ತಿ, ಜ್ಯೋತಿ ಕಟಕೆ, ವಿಜಯ ಪೂಜಾರಿ, ಲಲಿತಾ ನಡಗೇರಿ, ರಾಜಶೇಖರ ಕಲಶೆಟ್ಟಿ ಇದ್ದರು.
ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ: ಪಟ್ಟಣದ ಜಯಪ್ರಕಾಶ ನಾರಾಯಣ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಆರಂಭೋತ್ಸವ ನಡೆಯಿತು. ಶಾಲೆಯಲ್ಲಿ ತರಗತಿ ಕೋಣೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು. ಕೊಠಡಿಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಯಿತು. ನಂತರ ಶಾಲೆಗೆ ಮೊದಲ ದಿನ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಿಹಿ ಹಂಚಿ ಸ್ವಾಗತ ಕೋರಿದರು.