ಕೋಲ್ಕತ್ತ: ಮೊದಲ ಬಾರಿ ಫೈನಲ್ ತಲುಪುವ ಕನಸಿನೊಂದಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಗುರುವಾರ ಡುರಾಂಡ್ ಕಪ್ ಟೂರ್ನಿಯ ನಾಲ್ಕರ ಘಟ್ಟದಲ್ಲಿ ಹೈದರಾಬಾದ್ ಎಫ್ಸಿ ವಿರುದ್ಧ ಇಲ್ಲಿ ಕಣಕ್ಕಿಳಿಯಲಿದೆ.
ಕಳೆದ ವರ್ಷ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಬಿಎಫ್ಸಿ 6–7ರಿಂದ ಎಫ್ಸಿ ಗೋವಾ ಎದುರು ಎಡವಿತ್ತು. ಆ ನಿರಾಸೆಯನ್ನು ಮರೆಯುವ ತವಕದಲ್ಲಿ ಸುನಿಲ್ ಚೆಟ್ರಿ ಬಳಗವಿದೆ.
ಬಿಎಫ್ಸಿ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಒಡಿಶಾ ಎಫ್ಸಿ ತಂಡವನ್ನು ಪರಾಭವಗೊಸಿತ್ತು. ಪಂದ್ಯದ ಕೊನೆಯ ಹಂತದಲ್ಲಿ ಗೋಲು ಗಳಿಸಿದ್ದ ರಾಯ್ಕೃಷ್ಣ ಗೆಲುವಿನ ರೂವಾರಿ ಎನಿಸಿದ್ದರು. ಎಂಟರಘಟ್ಟದಲ್ಲಿ ಹೈದರಾಬಾದ್, ರಾಜಸ್ಥಾನ ಯುನೈಟೆಡ್ ಸವಾಲು ಮೀರಿತ್ತು.
ಬಿಎಫ್ಸಿಗೆ ಚೆಟ್ರಿ, ರಾಯ್ಕೃಷ್ಣ ಅವರೊಂದಿಗೆ ಶಿವಶಕ್ತಿ ನಾರಾಯಣನ್ ಕೂಡ ಭರವಸೆ ಎನಿಸಿದ್ದಾರೆ.